ಹೊರಗೆ ಒಂದು ಹೆಜ್ಜೆ ಇಟ್ಟರೆ ಸಾಕು, ಬಿಸಿಲಿನ ತಾಪವೇ ದೇಹವನ್ನು ಸುಡುತ್ತಿರುವಂತಿದೆ. ಈ ಬೇಸಿಗೆಯಲ್ಲಿ ಹಲವರು ತಂಪಾಗಿರಬೇಕು ಎಂದು ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಆದರೆ ಆ ಸಣ್ಣ ತಪ್ಪೇ ಕೆಲವೊಮ್ಮೆ ದೊಡ್ಡ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. “ಇದರಿಂದ ಏನಾಗಲ್ಲ” ಎಂದು ನಿರ್ಲಕ್ಷ್ಯ ಮಾಡಿದರೆ ನೇರವಾಗಿ ಆಸ್ಪತ್ರೆ ಸೇರುವ ಪರಿಸ್ಥಿತಿಯೂ ಬರಬಹುದು.
ಬಿಸಿ ಹೆಚ್ಚಾಗಿದೆ ಎಂದು ಹಲವರು ದಿನಪೂರ್ತಿ ಕೂಲ್ ಡ್ರಿಂಕ್ಸ್, ಐಸ್ ವಾಟರ್, ಫ್ರಿಜ್ನಲ್ಲಿದ್ದ ತಣ್ಣೀರನ್ನು ಮಾತ್ರ ಹೆಚ್ಚು ಸೇವಿಸುತ್ತಾರೆ. ಕ್ಷಣಿಕವಾಗಿ ಇದು ರಿಲೀಫ್ ಕೊಡಬಹುದು. ಆದರೆ ದೇಹಕ್ಕೆ ಅಗತ್ಯವಾದ ನೈಸರ್ಗಿಕ ನೀರಿನ ಕೊರತೆ ಉಂಟಾದರೆ ಡಿಹೈಡ್ರೇಶನ್, ತಲೆಸುತ್ತು, ವಾಂತಿ, ದೌರ್ಬಲ್ಯ ಕಾಣಿಸಬಹುದು. ವಿಶೇಷವಾಗಿ ಬಿಸಿಲಿನಿಂದ ಬಂದು ತಕ್ಷಣ ಐಸ್ ತಣ್ಣೀರು ಕುಡಿಯುವುದು ಗಂಟಲು ಸೋಂಕು, ಶೀತ ಮತ್ತು ಕಫಕ್ಕೂ ಕಾರಣವಾಗಬಹುದು.
ಇದನ್ನೂ ಓದಿ:
ಇನ್ನೊಂದು ದೊಡ್ಡ ತಪ್ಪು ಎಂದರೆ ಊಟ ಬಿಟ್ಟು ಕೇವಲ ಜ್ಯೂಸ್ ಅಥವಾ ಕೂಲ್ ಡ್ರಿಂಕ್ಸ್ನ ಮೇಲೆ ನಂಬಿಕೆ ಇಡುವುದು. ಬಿಸಿಲಿನಲ್ಲಿ ದೇಹ ಹೆಚ್ಚು ಶಕ್ತಿ ಕಳೆದುಕೊಳ್ಳುತ್ತದೆ. ಈ ಸಮಯದಲ್ಲಿ ಸರಿಯಾದ ಆಹಾರ ಸೇವಿಸದಿದ್ದರೆ ಬಿಪಿ ಕಡಿಮೆಯಾಗುವುದು, ದೇಹ ನಿಶಕ್ತಿಯಾಗುವುದು, ಕೆಲವೊಮ್ಮೆ ಹೀಟ್ ಎಕ್ಸಾಷನ್ ಸಮಸ್ಯೆಯೂ ಉಂಟಾಗಬಹುದು.
ಮಧ್ಯಾಹ್ನದ ಬಿಸಿಲಿನಲ್ಲಿ ಹೊರಗೆ ಹೋಗಿ ನೀರು ಕುಡಿಯದೆ ಇರುವುದು ಅತ್ಯಂತ ಅಪಾಯಕಾರಿ. ಇದು ಹೀಟ್ ಸ್ಟ್ರೋಕ್ಗೆ ಕಾರಣವಾಗಬಹುದು. ಆದ್ದರಿಂದ ಸಾಕಷ್ಟು ನೀರು, ಎಳನೀರು, ಮಜ್ಜಿಗೆ, ಹಣ್ಣುಗಳನ್ನು ಸೇವಿಸಿ ದೇಹವನ್ನು ಹೈಡ್ರೇಟ್ ಆಗಿಡುವುದು ಬಹಳ ಮುಖ್ಯ.
ಬಿಸಿಲು ಜಾಸ್ತಿ ಅಂತ ದೇಹದ ಆರೈಕೆಯಲ್ಲಿ ನಿರ್ಲಕ್ಷ್ಯ ಮಾಡಿದರೆ ಜೋಕೆ ಅಲ್ಲ, ಆರೋಗ್ಯದ ವಿಷಯದಲ್ಲಿ ಗಂಭೀರ ಸಮಸ್ಯೆ ಎದುರಾಗಬಹುದು.



