ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಚುನಾವಣಾ ಅಖಾಡದ ಕಾವು ಏರುತ್ತಿದ್ದು, ರಾಜಕೀಯ ಪಕ್ಷಗಳ ಬಿರುಸಿನ ಮತಬೇಟೆಯ ನಡುವೆ ವಾಕ್ ಸಮರವೂ ಜೋರಾಗುತ್ತಿದ್ದು, ಇಂದು ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದಾರೆ.
ತಮಿಳುನಾಡಿನಲ್ಲಿ ಬಿರುಸಿನ ಪ್ರಚಾರದ ಸಮಯದಲ್ಲಿ ಎಐಎಡಿಎಂಕೆ ಪಕ್ಷ ಹಾಗೂ ಬಿಜೆಪಿ ನಡುವಿನ ಮೈತ್ರಿಯನ್ನು ಟೀಕಿಸುವ ಭರದಲ್ಲಿ ಖರ್ಗೆ, ಮೋದಿಯವರ ಜೊತೆ ಎಐಎಡಿಎಂಕೆ ಹೇಗೆ ಸೇರಿಕೊಂಡಿದೆ? ಅವರು ಒಬ್ಬ ಭಯೋತ್ಪಾದಕ, ಅವರಿಗೆ ಸಮಾನತೆ, ನಿಷ್ಠೆಗಳಲ್ಲಿ ನಂಬಿಕೆ ಇಲ್ಲ. ಇಂತಹ ವ್ಯಕ್ತಿಗಳ ಜೊತೆ ಸೇರಿದರೆ ಪ್ರಜಾಪ್ರಭುತ್ವವನ್ನೇ ಕೆಳಮಟ್ಟಕ್ಕೆ ತಳ್ಳುತ್ತಾರೆ ಎಂಬ ಅರ್ಥ ಎಂದು ಟೀಕಿಸಿದರು.
ಇತ್ತ ಆಡಿದ ಮಾತು ವ್ಯಾಪಕವಾಗಿ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ, ಯೂಟರ್ನ್ ಹೊಡೆದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ನನ್ನ ಮಾತಿನ ಉದ್ದೇಶ ಬೇರೆ ಇದ್ದು, ನಾನು ಮೋದಿ ಅವರನ್ನು ನೇರವಾಗಿ ಭಯೋತ್ಪಾದಕ ಎಂದು ಹೇಳುತ್ತಿಲ್ಲ. ಅವರು ಎಲ್ಲರನ್ನೂ ಬೆದರಿಸುತ್ತಾರೆ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಅವರು ಇಡಿ, ಸಿಬಿಐ, ಐಟಿ ಅಧಿಕಾರಿಗಳ ಮೂಲಕ ಭಯ ಹುಟ್ಟಿಸುತ್ತಾರೆ. ಹಾಗಾಗಿ ನಾನು ಆ ಅರ್ಥದಲ್ಲಿ ಹೇಳಿದೆ. ಭಯೋತ್ಪಾದಕ ಎಂದು ನಾನು ಹೇಳಲಿಲ್ಲ ಎಂದು ಸ್ಪಷ್ಟನೆ ನೀಡಿದರು.



