ಹೊಸ ದಿಗಂತ ವರದಿ, ಬೆಳ್ತಂಗಡಿ:
ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ದ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತಡರಾತ್ರಿ ಕಿಡಿಗೇಡಿಯೊಬ್ಬ ಏಕಾಏಕಿ ನುಗ್ಗಿ ದೇವರ ಮೂರ್ತಿಯನ್ನು ಭಗ್ನಗೊಳಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ರಾತ್ರಿ ಸುಮಾರು ಎರಡು ಗಂಟೆ ವೇಳೆ ಕಾರಿನಲ್ಲಿ ದೇವಸ್ಥಾನದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ಬಂದ ಸ್ಥಳೀಯ ನಿವಾಸಿ ಅಜೇಯ್ ಎಂಬ ಕೀಡಿಗೇಡಿ, ಜೋರಾಗಿ ಕೂಗಾಡಿ ಮನೆಗೆ ನುಗ್ಗಲು ಎತ್ನಿಸಿದಾಗ ಮನೆಯರು ಜೋರು ಮಾಡಿ ಕಳುಹಿಸಿದ್ದಾರೆ.
ಆದರೆ ಆತ ಬಳಂಜ ದೇವಸ್ಥಾನದ ಪವಿತ್ರವಾದ ದೇವರ ಜಲಕದ ಕೆರೆಗೆ ಹಾರಿ ಅಲ್ಲಿಂದ ದೇವಸ್ಥಾನದ ಮೇಲೆ ಹೋಗಿ ಹಂಚು ತೆಗೆದು ಒಳನುಗ್ಗಿದ್ದಾನೆ. ಬಳಿಕ ಕೊಡಮಣಿತ್ತಾಯ ದೈವದ ಗುಡಿಗೆ ಇಳಿದು ದೈವದ ಮಣೆ ಮಂಚದಲ್ಲಿದ್ದ ಘಂಟಾಮಣಿಯನ್ನು ತೆಗೆದು ವಿಕೃತಿ ಮೆರೆದಿದ್ದಾನೆ.
ಬಳಿಕ ದೇವಸ್ಥಾನ ತೀರ್ಥ ಮಂಟಪದ ಬಳಿಯಿರುವ ದೊಡ್ಡ ಘಂಟೆಯನ್ನು ಬಾರಿಸಿ, ಗೋಪಾಲಕೃಷ್ಣ ದೇವರ ಗುಡಿಯೊಳಗೆ ನುಗ್ಗಿ ದೇವರ ವಿಗ್ರಹವನ್ನು ತೆಗೆದು ನೆಲಕ್ಕೆ ಎಸೆದು ಭಗ್ನಗೊಳಿಸಿದ್ದಾನೆ. ಜೊತೆಗೆ ಗುಡಿಯೊಳಗಿದ್ದ ದೇವರ ಪರಿಕರಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾನೆ.
ಈ ಬೆನ್ನಲ್ಲೇ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಯನ್ನು ಗಂಭೀರವಾಗಿ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



