ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಚುನಾವಣೆಯ ಎರಡನೇ ಮತದಾನಕ್ಕೆ ಮುನ್ನ ಬರಾಕ್ಪೋರ್ನಲ್ಲಿ ಪ್ರಧಾನಿ ಮೋದಿ ಅವರು ಬಿರುಸಿನ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಮೋದಿ, ಬಂಗಾಳದಲ್ಲಿ ಬಿಜೆಪಿಯ ಗೆಲುವು ಸಾಧಿಸಲಿದ್ದು, ಮೇ 4ರ ಫಲಿತಾಂಶದ ನಂತರ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಗೆಲುವಿನ ವಿಶ್ವಾಸ ಮೂಡಿಸಿದರು.
ಇದು ನನ್ನ ಕೊನೆಯ ಪ್ರಚಾರ ರ್ಯಾಲಿಯಾಗಿದೆ. ಇನ್ನು ನಾನು ಮತದಾನ ಬಳಿಕ ಮೇ 4ರ ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಸರಕಾರದ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ ಎಂಬ ಭರವಸೆಯೊಂದಿಗೆ ಮರಳುತ್ತೇನೆ ಎಂದರು.
ಈ ವೇಳೆ ದೀದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಬಂಗಾಳದಲ್ಲಿ ಕೈಗಾರಿಕೆಗಳು ನಾಶವಾಗಿವೆ ಮತ್ತು ಫ್ಯಾಕ್ಟರಿಗಳು ಬಂದ್ ಆಗುತ್ತಿದೆ. ಇದಕ್ಕೆ ಕಾರಣ ಅಭಿವೃದ್ಧಿಯ ಸ್ಪಷ್ಟ ನೋಟ ಇಲ್ಲದೆ ಇರುವುದು. ಅದಕ್ಕಾಗಿ ಬಂಗಾಳದಲ್ಲಿ ಡಬಲ್ ಎಂಜಿನ್ ಸರ್ಕಾರದ ಅಗತ್ಯವಿದ್ದು, ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಅಭಿವೃದ್ಧಿ ಮಾಡಲಿದೆ ಎಂದು ತಿಳಿಸಿದರು.
ಯುವಕರಿಗೆ ಮೋದಿ ನೀಡಿದ ಐದು ಗ್ಯಾರಂಟಿಗಳು
ಬಂಗಾಳದ ಯುವಕರಿಗೆ ಪ್ರಧಾನಿ ಮೋದಿ ಐದು ಗ್ಯಾರಂಟಿಗಳನ್ನು ಘೋಷಿಸಿದರು. ಸರಿಯಾದ ಸಮಕ್ಕೆ ಸರಕಾರಿ ನೇಮಕಾತಿ, ಖಾಲಿ ಹುದ್ದೆಗಳ ತ್ವರಿತ ಭರ್ತಿ, ಕೌಶಲ್ಯ ಆಧಾರಿತ ಉದ್ಯೋಗ ಸೃಷ್ಟಿ, 7ನೇ ವೇತನ ಆಯೋಗದ ಪ್ರಯೋಜನಗಳು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಹೆಚ್ಚಿಸುವ ಜಿ-ರಾಮ್ ಯೋಜನೆ ಜಾರಿ ಮಾಡಲಾಗುವುದು ಎಂದು ತಿಳಿಸಿದರು.



