ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಜಯವನ್ನು ಸರ್ಕಾರದ ಕಾರ್ಯಕ್ಷಮತೆ ಮತ್ತು ಪಕ್ಷದ ತತ್ವಗಳಿಗೆ ಜನರು ನೀಡಿದ ಬೆಂಬಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ವಿವಿಧ ರೀತಿಯ ಟೀಕೆಗಳು, ಅಪಪ್ರಚಾರ ಹಾಗೂ ರಾಜಕೀಯ ಒತ್ತಡಗಳ ನಡುವೆಯೂ ಜನರು ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟು ಮತ ಚಲಾಯಿಸಿರುವುದು ದೊಡ್ಡ ಸಂದೇಶ ಎಂದು ಹೇಳಿದರು. ಈ ನಂಬಿಕೆಯನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಜವಾಬ್ದಾರಿ ಎಂದೂ ಸ್ಪಷ್ಟಪಡಿಸಿದರು.
ಇದನ್ನೂ ಓದಿ:
ರಾಜ್ಯದ ಜನರ ಆಶಯಗಳಿಗೆ ಸ್ಪಂದಿಸುವ ಆಡಳಿತ ಮುಂದುವರಿಯಲಿದ್ದು, ಮುಂದಿನ ಚುನಾವಣೆಯಲ್ಲಿಯೂ ಇದೇ ರೀತಿಯ ಬೆಂಬಲ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು. ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಜಾತ್ಯತೀತ ರಾಜಕಾರಣಕ್ಕೆ ಜನರು ಆದ್ಯತೆ ನೀಡಿರುವುದು ಪ್ರಜಾಪ್ರಭುತ್ವದ ಬಲವನ್ನು ತೋರಿಸುತ್ತದೆ ಎಂದರು.
ಇದೇ ವೇಳೆ ಕೇರಳದಲ್ಲಿ ಕಾಂಗ್ರೆಸ್ ಸಾಧನೆಯನ್ನೂ ಸ್ಮರಿಸಿದ ಸಿದ್ದರಾಮಯ್ಯ, ಅಲ್ಲಿನ ನಾಯಕತ್ವದ ಸಂಘಟಿತ ಪ್ರಯತ್ನ, ಕಾರ್ಯತಂತ್ರ ಮತ್ತು ರಾಷ್ಟ್ರೀಯ ನಾಯಕರ ಶ್ರಮ ಫಲ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜನರ ನಂಬಿಕೆಗೆ ತಕ್ಕ ಆಡಳಿತ ನೀಡುವುದೇ ಕಾಂಗ್ರೆಸ್ ಗುರಿ ಎಂದು ಅವರು ಹೇಳಿದರು.



