ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಲೀಗ್ ಹಂತ ನಿರ್ಣಾಯಕ ಘಟ್ಟ ತಲುಪಿರುವ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಮುಖಾಮುಖಿ ಸಾಕಷ್ಟು ಕುತೂಹಲ ಕೆರಳಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಉಭಯ ತಂಡಗಳ ಪಾಲಿಗೂ ಜೀವಂತಿಕೆಯ ಹೋರಾಟವಾಗಿದ್ದು, ಸೋಲು ಕಂಡ ತಂಡದ ಪ್ಲೇಆಫ್ ಕನಸು ಬಹುತೇಕ ಮುರಿಯುವ ಸಾಧ್ಯತೆ ಇದೆ.
ಗಾಯದ ಸಮಸ್ಯೆಯಿಂದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಿಂದ ಹೊರಗುಳಿದಿದ್ದು, ತಂಡದ ನಾಯಕನ ಜವಾಬ್ದಾರಿಯನ್ನು ಸೂರ್ಯಕುಮಾರ್ ಯಾದವ್ ಹೊತ್ತಿದ್ದಾರೆ. ಟಾಸ್ ಗೆದ್ದ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಲಕ್ನೋಗೆ ಬ್ಯಾಟಿಂಗ್ ಆಹ್ವಾನ ನೀಡಿದ್ದಾರೆ. ಆರಂಭದಲ್ಲೇ ಎದುರಾಳಿ ಮೇಲೆ ಒತ್ತಡ ಹೇರುವ ಲೆಕ್ಕಾಚಾರದಲ್ಲಿ ಮುಂಬೈ ಕಣಕ್ಕಿಳಿದಿದೆ.
ಇದನ್ನೂ ಓದಿ:
ಈ ಪಂದ್ಯಕ್ಕಾಗಿ ಮುಂಬೈ ಬಳಗದಲ್ಲಿ ಹಲವು ಬದಲಾವಣೆಗಳು ಕಂಡುಬಂದಿವೆ. ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಮರಳಿರುವುದು ತಂಡಕ್ಕೆ ದೊಡ್ಡ ಬಲ ನೀಡಿದೆ. ಜೊತೆಗೆ ದೀಪಕ್ ಚಹರ್ ಹಾಗೂ ಕಾರ್ಬಿನ್ ಬಾಷ್ ಸೇರ್ಪಡೆಯಿಂದ ಬೌಲಿಂಗ್ ವಿಭಾಗಕ್ಕೂ ಹೊಸ ಚೈತನ್ಯ ಬಂದಿದೆ.
ಇತ್ತ ಲಕ್ನೋ ಕೂಡ ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ರಿಷಭ್ ಪಂತ್ ನೇತೃತ್ವದ ತಂಡ, ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿಡಲು ಕಾತರಿಸಿದೆ. ಎರಡೂ ತಂಡಗಳಿಗೂ ಇದು ಕೇವಲ ಪಂದ್ಯವಲ್ಲ, ಟೂರ್ನಿಯಲ್ಲಿ ಉಳಿಯುವ ಹೋರಾಟವಾಗಿದೆ.



