ಹೊಸದಿಗಂತ ವರದಿ ಉತ್ತರಕನ್ನಡ:
ಜಮೀರ್ ಅಹ್ಮದ್ ಕೊಲೆಗೆ ಸುಪಾರಿ ಕೊಟಿದ್ದ ಮಂಜುನಾಥ ಕಾಜಗಾರ ಜೊತೆ ತೆರಳಿ ಕಂಟ್ರಿ ಪಿಸ್ತೂಲ್ ತಂದ ಆರೋಪದ ಅಡಿಯಲ್ಲಿ ಪೊಲೀಸರು ಮತ್ತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಏ.24 ರಂದು ರೌಡಿ ಶೀಟರ್ ಜಮೀರ್ ಅಹ್ಮದ ಪಟ್ಟಣದಲ್ಲಿ ಊಟಕ್ಕೆಂದು ಬಂದಿದ್ದ ವೇಳೆ ಭೀಕರವಾಗಿ ಕೊಲೆಗೀಡಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ ಮಂಜುನಾಥ ಕಾಜಗಾರ ಸೇರಿ 7 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಆ ವೇಳೆಯಲ್ಲಿ ಪೊಲೀಸರು ಆರೋಪಿಗಳಿಂದ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಕಂಟ್ರಿ ಪಿಸ್ತೂಲ್ ಗಳ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಪಿಸ್ತೂಲ್ ನೀಡಿದ ದೆಹಲಿಯ ದಿಲ್ ರಾಜ್ ದ್ಯಾನಿ ಎಂಬುವನನ್ನು ಬಂಧಿಸಿದ್ದರು.
ಈತ ಹಾಗೂ ಕೊಲೆ ಆರೋಪಿ ಮಂಜುನಾಥ ಕಾಜಗಾರ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಕಂಟ್ರಿ ಪಿಸ್ತೂಲ್ ತರಲು ಮತ್ತೆ ನಾಲ್ಕು ಜನ ಹೋಗಿರುವುದಾಗಿ ಮಂಜುನಾಥ ಕಾಜಗಾರ ಪೊಲೀಸ್ ತನಿಖೆ ವೇಳೆಯಲ್ಲಿ ಬಾಯಿಬಿಟ್ಥಿದ್ದನು. ಅದರಂತೆ ಪೊಲೀಸರು ಶನಿವಾರ ನಾಲ್ಕು ಜನರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾವು ಹೋಗಿರುವುದಾಗಿ ಪೊಲೀಸರ ಮುಂದೆ ಅವರು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಪಟ್ಟಣದ ಕಿಲ್ಲೆ ಓಣಿಯ ಮಲ್ಲಿಕ್ ಜಹಾನ್ ಯಾನೆ ಜಹೀರ ಶಬ್ಬೀರ್ ಶೇಖ್, ಮಹಮ್ಮದ್ ಸಾದೀಕ್ ಅಬ್ದುಲ್ ರಜಾಕ ದರ್ಗಾವಾಲೆ, ಮಾರಿಕಾಂಬಾ ನಗರದ ಅಸ್ಕರಅಲಿ ಮಕ್ತುಮಅಲಿ ದೊಡ್ಡಮನಿ ಮತ್ತು ಸಾಹಿಲ್ ಬಾಬಾಬುಡನ್ ನಂದಿಗಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ:
ಕಳೆದ ಎರಡು ವರ್ಷಗಳ ಹಿಂದೆ ಉತ್ತರ ಪ್ರದೇಶದ ಗೋರಖಪುರಕ್ಕೆ ಮಂಜುನಾಥ ಕಾಜಗಾರ ಜೊತೆಗೆ ಹೋಗಿದ್ದ ಈ ಬಂಧಿತ ಆರೋಪಿಗಳು ಕಂಟ್ರಿ ಪಿಸ್ತೂಲ್ ತಂದಿದ್ದರು ಎಂದು ತಿಳಿದುಬಂದಿದೆ. ಅದೇ ಪಿಸ್ತೂಲ್ ನಿಂದ ಜಮೀರ್ ಕೊಲೆ ಮಾಡುವ ಸಂದರ್ಭದಲ್ಲಿ ಗುಂಡು ನೆಲಕ್ಕೆ ಬಡಿದಿತ್ತು ಎಂದು ತನಿಖೆ ವೇಳೆಯಲ್ಲಿ ತಿಳಿದಿತ್ತು.
ಜಮೀರ್ ಕೊಲೆಯ ತನಿಖೆಯನ್ನು ಮುಂದುವರಿಸಿದ ಪೊಲೀಸರು ತನಿಖೆ ನಡೆಸಿದಾಗ ಈವರೆಗೆ ಮೂರು ಕಂಟ್ರಿ ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕಂಟ್ರಿ ಪಿಸ್ತೂಲ್ ಪ್ರಕರಣದಲ್ಲಿ ಬಂಧಿತರಾದ ಮಲ್ಲಿಕ್ ಜಹಾನ್ ಯಾನೆ ಜಹೀರ ಶಬ್ಬೀರ್ ಶೇಖ್, ಮಹಮ್ಮದ್ ಸಾದೀಕ್ ಅಬ್ದುಲ್ ರಜಾಕ ದರ್ಗಾವಾಲೆ, ಅಸ್ಕರಅಲಿ ಮಕ್ತುಮಅಲಿ ದೊಡ್ಡಮನಿ ಮತ್ತು ಸಾಹಿಲ್ ಬಾಬಾಬುಡನ್ ನಂದಿಗಟ್ಟಿ ಈ ನಾಲ್ಕು ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದಾರೆ.



