ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚೆ, ಸೂಟು-ಬೂಟು ರಾಜಕಾರಣ: ಹಳೆಯ ಸಮಸ್ಯೆಗಳಿಗೆ ಹೇಗೆ ಪರಿಹಾರ ಕೊಡ್ತಾರೆ ನೋಡೋಣ ಎಂದ ಅಣ್ಣಾಮಲೈ
ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್ ಮುಖ್ಯಮಂತ್ರಿ ಹುದ್ದೆಗೆ ಪ್ರಮಾಣವಚನ ಸ್ವೀಕರಿಸಿದ್ದು ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯಾಗಿ ಪರಿಗಣಿಸಲಾಗುತ್ತಿದೆ. ದಶಕಗಳ ಡಿಎಂಕೆ ಹಾಗೂ ಎಐಎಡಿಎಂಕೆ ಪ್ರಾಬಲ್ಯವನ್ನು ಮುರಿದ ಈ ಬೆಳವಣಿಗೆ ಹೊಸ ರಾಜಕೀಯ ಯುಗ ಆರಂಭವಾಗಿದೆ ಎಂಬ ಚರ್ಚೆ ನಡೆಯುತ್ತಿದೆ.
ಪ್ರಮಾಣವಚನ ಸಮಾರಂಭದಲ್ಲಿ ವಿಜಯ್ ಬಿಳಿ ಪಂಚೆ-ಶರ್ಟ್ ಬದಲು ಕಪ್ಪು ಸೂಟ್, ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಆಗಮಿಸಿದ್ದು ಗಮನ ಸೆಳೆದಿದೆ. ಸಾಮಾನ್ಯವಾಗಿ ತಮಿಳುನಾಡು ರಾಜಕೀಯದಲ್ಲಿ ಸರಳ ಬಿಳಿ ವೇಷಭೂಷಣ ರೂಢಿಯಾಗಿದ್ದರೂ, ಅವರ ವಿಭಿನ್ನ ಶೈಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:
ಈ ನಡುವಲ್ಲಿ ಬಿಜೆಪಿ ನಾಯಕ ಅಣ್ಣಾಮಲೈ ಯುಎಸ್ನಲ್ಲಿ ನಡೆದ ಸಂವಾದದಲ್ಲಿ ವಿಜಯ್ ಅವರ ವೇಷಭೂಷಣ ಮತ್ತು ತಮಿಳುನಾಡಿನ ರಾಜಕೀಯ ಪರಂಪರೆಯನ್ನು ಹಾಸ್ಯಾತ್ಮಕವಾಗಿ ಹೋಲಿಸಿದ್ದಾರೆ. ಅವರು ಕರುಣಾನಿಧಿ, ಸ್ಟಾಲಿನ್ ಮತ್ತು ಉದಯನಿಧಿ ಅವರ ಕಾಲದಲ್ಲಿ ಪ್ರವಾಹದ ಸಂದರ್ಭಗಳಲ್ಲಿ ತೆಗೆದ ಫೋಟೋಗಳನ್ನು ಉಲ್ಲೇಖಿಸಿ, ಕುಟುಂಬ ರಾಜಕಾರಣದ ನಿರಂತರತೆಯನ್ನು ತಮಾಷೆಯ ಧಾಟಿಯಲ್ಲಿ ವಿವರಿಸಿದರು.
ಅಣ್ಣಾಮಲೈ ಅವರ ಮಾತಿನ ಪ್ರಕಾರ, ತಮಿಳುನಾಡಿನ ಪ್ರವಾಹದ ಒಂದು ಜನಪ್ರಿಯ ಫೊಟೊ ಇದೆ, ಫೋಟೊದಲ್ಲಿ ಕರುಣಾನಿಧಿ ಅವರು ಪ್ರವಾಹದ ನೀರಿನಲ್ಲಿ ತಮ್ಮ ಪಂಚೆಯನ್ನು ಮೊಳಕಾಲಿನ ವರೆಗೆ ಎತ್ತಿಕೊಂಡು ನಡೆಯುತ್ತಿದ್ದಾರೆ. ಬಳಿಕ 2000 ರಲ್ಲಿ ಪ್ರಹಾವದಲ್ಲಿ ಅವರ ಮಗ ಸ್ಟಾಲಿನ್ (ಮಾಜಿ ಸಿಎಂ) ಅವರು ಪ್ರವಾಹದ ನೀರಿನಲ್ಲಿ ಪಂಚೆ ಎತ್ತಿ ನಡೆಯುತ್ತಿರುವ ಫೋಟೊ ಸಹ ಇದೆ. ಇತ್ತೀಚೆಗೆ ಬಂದ ಪ್ರವಾಹದಲ್ಲಿ ಸ್ಟಾಲಿನ್ ಅವರ ಮಗ ಉದಯನಿಧಿ (ಮಾಜಿ ಡಿಸಿಎಂ) ಪ್ರವಾಹದ ನೀರಿನಲ್ಲಿ ನಿಂತಿರುವ ಫೋಟೊ ಇದೆ. ಈಗ ವಿಜಯ್ ಅವರ ಸೂಟು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಪ್ರವಾಹದ ನೀರಿನಲ್ಲಿ ಹೇಗೆ ನಡೆಯುತ್ತಾರೆಯೋ ನೋಡಬೇಕು. ಈಗ ವಿಜಯ್ ಹೊಸ ಶೈಲಿಯ ನಾಯಕತ್ವದಲ್ಲಿ ಬಂದಿದ್ದು, ಅದೇ ಹಳೆಯ ಸಮಸ್ಯೆಗಳಿಗೆ ಹೇಗೆ ಪರಿಹಾರ ನೀಡುತ್ತಾರೆ ಎಂಬುದು ಮುಖ್ಯ ಪ್ರಶ್ನೆ ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ, ವಿಜಯ್ ಅವರ ಪ್ರಮಾಣವಚನದ ಶೈಲಿ ಹಾಗೂ ಅಣ್ಣಾಮಲೈ ಅವರ ಟೀಕೆ ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



