ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ವಿಚಾರ ರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿರುವ ಸಚಿವ ಎಂ.ಸಿ. ಸುಧಾಕರ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯಭರಿತ ಹೇಳಿಕೆ ನೀಡಿ ಗಮನಸೆಳೆದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿ ಏನೇ ಮಾಡಿದರೂ ಅಂಧಭಕ್ತರು ಬೆಂಬಲಿಸುತ್ತಾರೆ ಎಂದು ಟೀಕಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವನ್ನು ಸಹ ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ ಸುಧಾಕರ್, ಚಿನ್ನ ಖರೀದಿ ಮಾಡಬೇಡಿ ಎಂದಾಗಲೂ ಬೆಂಬಲಿಸಿದರು. ವಾಹನ ಬಳಸಬೇಡಿ ಎಂದರೂ ಕೇಳುತ್ತಾರೆ. ಮೋದಿ ಹೇಳುವುದನ್ನೆಲ್ಲಾ ಒಪ್ಪಿಕೊಳ್ಳುವವರಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:
ಮೋದಿ ಸರ್ಕಾರ ಜನಸ್ನೇಹಿ ಆಡಳಿತ ನೀಡುತ್ತಿದೆ ಎನ್ನುವವರೇ ಇದೀಗ ಇಂಧನ ದರ ಏರಿಕೆಯಲ್ಲೂ ಸಂತೋಷಪಡುತ್ತಿದ್ದಾರೆ ಎಂದು ಸಚಿವರು ವ್ಯಂಗ್ಯವಾಡಿದರು. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇಂಧನ ದರ ಏರಿಕೆ ಜನರ ಮೇಲಿನ ಆರ್ಥಿಕ ಹೊರೆ ಹೆಚ್ಚಿಸುತ್ತಿದೆ ಎಂಬ ಟೀಕೆಗಳು ಮುಂದುವರಿದಿವೆ.



