ಹೊಸದಿಗಂತ ವರದಿ ವಿಜಯಪುರ:
ಜನಿವಾರ ತೆಗೆದಾಗ ಗಲಾಟೆ ಮಾಡಿದ್ರಿ. ಹಿಜಾಬ್, ಜನಿವಾರ, ನಾವು ಲಿಂಗ ಕಟ್ಟಿಕೊಳ್ಳುತ್ತೇವೆ ಅದಕ್ಕೂ ಅನ್ವಯ ಆಗುತ್ತೆ. ಸಿಖ್ಖರು ಪೇಟಾ ಹಾಕೋತ್ತಾರೆ. ಅದಕ್ಕೂ ಅನುಮತಿ ನೀಡಿದ್ದೇವೆ. ನಾವು ಸೆಲೆಕ್ಟೀವ್ ಅಲ್ಲ ಸಮಗ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಕುರಿತಾದ ವಿವಾದ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಜಾತಿ ಮತ್ತು ಧರ್ಮಗಳ ಅವರವರ ಆಚರಣೆಗೆ ಗೌರವ ಕೊಡುತ್ತೇವೆ. ಜನರು ಜನಿವಾರ ಧರಿಸುವುದು, ಲಿಂಗ ಧರಿಸುವುದು ಅಥವಾ ಸಿಖ್ಖರು ಪೇಟ ಧರಿಸುವುದು ಅವರವರ ಧಾರ್ಮಿಕ ಹಕ್ಕು. ಅದನ್ನು ನಾವು ಬೆಂಬಲಿಸುತ್ತೇವೆ. ದೇವಸ್ಥಾನ ಅಥವಾ ಮಠಗಳ ಮೇಲೆ ಕೇಸರಿ ಧ್ವಜ ಇರುವುದು ಸಹಜ. ಆದರೆ ಈ ಹಿಂದೆ ಶಾಲಾ ಮಕ್ಕಳು ಕೇಸರಿ ಶಾಲು ಧರಿಸುತ್ತಿದ್ದರಾ?, ಸುಮ್ಮನೆ ಭಂಡ ನ್ಯಾಯವೇಕೆ? ಎಂದರು.
ಇದನ್ನೂ ಓದಿ:
ವಿಭೂತಿ, ಕುಂಕಮ ಹಚ್ಚಿಕೊಂಡು ಶಾಲೆಗೆ ಹೋಗಬಹುದಾ ಎಂಬ ವಿಚಾರಕ್ಕೆ, ತಪ್ಪು ಏನಿದೆ, ವಿಭೂತಿ ಕುಂಕಮ ಹಚ್ಚಿಕೊಂಡು ಶಾಲೆಗೆ ಹೋಗಬಹುದು. ಕುಂಕುಮ ವಿಭೂತಿ ನಾಮ ಹಚ್ಚಿಕೊಂಡು ಹೋಗ್ತಿದ್ರು ಅದಕ್ಕೆ ಯಾರು ಬೇಡಾ ಅನ್ನುತ್ತಾರೆ. ಜನಿವಾರ ಇಷ್ಟಲಿಂಗ ಹಾಕಿಕೊಂಡಿರುತ್ತಾರೆ. ಅದಕ್ಕೆ ಯಾರು ಬೇಡಾ ಅನ್ನುತ್ತಾರೆ ಎಂದರು.
ಕೇಸರಿ ಶಾಲು ಹಂಚುತ್ತೇವೆ- ಯತ್ನಾಳ ಹೇಳಿಕೆ ವಿಚಾರಕ್ಕೆ, ನಾನು ಅವರ ಬಗ್ಗೆ ಮಾತನಾಡಲ್ಲ. ಸಾಂಪ್ರದಾಯಿಕ ಗುರುತುಗಳು, ಶಾಲಾ- ಕಾಲೇಜುಗಳಿಗೆ ವಿದ್ಯಾರ್ಥಿಗಳು ವಿಭೂತಿ, ಕುಂಕುಮ ಅಥವಾ ನಾಮ ಇಟ್ಟುಕೊಂಡು ಬರುವುದರಲ್ಲಿ ಯಾವುದೇ ತಪ್ಪಿಲ್ಲ. ಮತ್ತು ಅದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ ಎಂದರು.



