ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ರಿಷಿಕೇಶ್ ಸಮೀಪ ಸೋಮವಾರ ತಡರಾತ್ರಿ ಉಜ್ಜಯಿನಿ ಎಕ್ಸ್ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ಆತಂಕ ಸೃಷ್ಟಿಸಿದೆ.
ಯೋಗ ನಗರಿ ರೈಲು ನಿಲ್ದಾಣದ ಬಳಿ ನಡೆದ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಮಾಧಾನದ ಸಂಗತಿಯಾಗಿದೆ. ಘಟನೆ ವೇಳೆ ರೈಲು ನಿರ್ವಹಣಾ ಕಾರ್ಯದಲ್ಲಿದ್ದು, ಪ್ರಯಾಣಿಕರು ಇರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕ್ ವೈಫಲ್ಯವೇ ಕಾರಣ?
ಪ್ರಾಥಮಿಕ ತನಿಖೆ ಪ್ರಕಾರ, ನಿರ್ವಹಣಾ ಕಾರ್ಯದ ವೇಳೆ ಬ್ರೇಕ್ ವೈಫಲ್ಯ ಉಂಟಾಗಿ ರೈಲು ನಿಯಂತ್ರಣ ತಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಮೂರು ಬೋಗಿಗಳು ಹಳಿಯಿಂದ ಕೆಳಕ್ಕೆ ಇಳಿದಿವೆ. ಸಂಪೂರ್ಣ ರೈಲು ಚಲನೆಯಲ್ಲಿದ್ದ ಸಂದರ್ಭದಲ್ಲೇ ಈ ದೋಷ ಸಂಭವಿಸಿದ್ದು, ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ:
ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು
ಅಪಘಾತದ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದರು. ಬಳಿಕ ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ಸ್ಥಳವನ್ನು ತಮ್ಮ ವಶಕ್ಕೆ ಪಡೆದು ಜನರನ್ನು ತೆರವುಗೊಳಿಸಿದರು. ಹಿರಿಯ ರೈಲ್ವೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತನಿಖೆ ಆರಂಭಿಸಿದ ರೈಲ್ವೆ ಇಲಾಖೆ
ಈ ಘಟನೆ ಕುರಿತು ರೈಲ್ವೆ ಇಲಾಖೆ ಸಮಗ್ರ ತನಿಖೆ ಆರಂಭಿಸಿದೆ. ತಾಂತ್ರಿಕ ದೋಷವೇ ಅಥವಾ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.



