ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲದ ಹಣವನ್ನು ವಾಪಸ್ ಕೇಳಲು ಹೋದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ (MLC) ಅಡಗೂರು ಎಚ್. ವಿಶ್ವನಾಥ್ ಮತ್ತು ಮಗ ಅಮಿತ್ ದೇವರಹಟ್ಟಿ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ಅವರು ನೀಡಿದ ದೂರಿನ ಮೇರೆಗೆ, ನ್ಯಾಯಾಲಯದ ನಿರ್ದೇಶನದಂತೆ ಈ ಎಫ್ಐಆರ್ ದಾಖಲಿಸಲಾಗಿದೆ. 2013 ರಲ್ಲಿ ವಿಶ್ವನಾಥ್ ಸಂಸದರಾಗಿದ್ದಾಗ, ಎಂಟಿಬಿ ನಾಗರಾಜ್ ಮುಖಾಂತರ ವಿಶ್ವನಾಥ್ ಹಾಗೂ ಅವರ ಮಗನಿಗೆ 55 ಲಕ್ಷ ಸಾಲ ನೀಡಲಾಗಿತ್ತು. ಆದರೆ ಈ ಹಣವನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ವಿಶ್ವನಾಥ್ ಇದ್ದಾಗ ಮಹದೇವು ಹಣ ಕೇಳಲು ಹೋಗಿದ್ದರು. ಈ ವೇಳೆ ವಿಶ್ವನಾಥ್ ಅವಾಚ್ಯ ಪದಗಳಿಂದ ನಿಂದಿಸಿ, ಕೈಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.



