ಹೊಸದಿಗಂತ ವರದಿ ಬಳ್ಳಾರಿ:
ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡುವಂತೆ ಆಗ್ರಹಿಸಿ ನಗರದ ಕೌಲ್ಬಜಾರ್ ಪ್ರದೇಶದ ದಿವಾನೆ ಮಸ್ತಾನ್ ವಲಿ ಬಾಬಾ ದರ್ಗಾ ಬಳಿ ಮುಸ್ಲಿಂ ಸಮುದಾಯದ ಮುಖಂಡರು ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ವರಿಷ್ಠರಿಗೆ ಮನವಿ, ಸಮುದಾಯದ ಒತ್ತಾಯ
ಜಮೀರ್ ಅಹ್ಮದ್ ಖಾನ್ ಅವರಿಗೆ ಮೊದಲ ಹಂತದಲ್ಲೇ ಡಿಸಿಎಂ ಸ್ಥಾನ ನೀಡಬೇಕಾಗಿತ್ತು. ಆದರೆ ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿಲ್ಲ. ಈಗಾದರೂ ಪಕ್ಷದ ವರಿಷ್ಠರು ಸಮುದಾಯದ ಬೇಡಿಕೆಗೆ ಸ್ಪಂದಿಸಿ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.
‘ಸಮುದಾಯದ ಕೊಡುಗೆ ಮರೆಯಬೇಡಿ’
ಕಾಂಗ್ರೆಸ್ ಪಕ್ಷದ ಬೆಳವಣಿಗೆ ಹಾಗೂ ಚುನಾವಣಾ ಗೆಲುವುಗಳಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಪ್ರತಿ ಚುನಾವಣೆಯಲ್ಲೂ ಪಕ್ಷದ ಪರವಾಗಿ ದುಡಿಯುವ ಮತ್ತು ಮತಗಳ ಮೂಲಕ ಬೆಂಬಲ ನೀಡುವ ಸಮುದಾಯವನ್ನು ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನವನ್ನು ಮುಖಂಡರು ವ್ಯಕ್ತಪಡಿಸಿದರು.
ಇದನ್ನೂ ಓದಿ:
2028 ಚುನಾವಣೆ ಉಲ್ಲೇಖಿಸಿ ಎಚ್ಚರಿಕೆ
ಸಮುದಾಯದ ಭಾವನೆಗಳಿಗೆ ಬೆಲೆ ನೀಡದಿದ್ದರೆ 2028ರ ಚುನಾವಣೆಯಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಕೆ ನೀಡಿದರು. ಪಕ್ಷಕ್ಕಾಗಿ ನಿರಂತರವಾಗಿ ಶ್ರಮಿಸುವ ನಾಯಕರಿಗೆ ಸೂಕ್ತ ಗೌರವ ಮತ್ತು ಸ್ಥಾನಮಾನ ಸಿಗಬೇಕು ಎಂದು ಆಗ್ರಹಿಸಿದರು.
ಮುಖಂಡರ ಉಪಸ್ಥಿತಿ
ಈ ಸಂದರ್ಭದಲ್ಲಿ ಅಸ್ಲಾಂ ಬಾಯ್, ಸೈಫುಲ್ಲಾ, ವಾಹಿದ್, ಪಿಂಜರ್ ನೂರ್, ಜಾಂಡ ಜಿಲಾನ್, ಮೊಷಿನ್, ಕಲೀಮ್, ಮನ್ಸೂರ್, ಮುನೀರ್, ಸೀನಾ, ಶಿವಾಜಿ, ಬಟ್ಟಿ ಉಮೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.



