ನಮ್ಮ ಸನಾತನ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಸ್ಸಂಜೆಯ ಸಮಯವನ್ನು ಅತ್ಯಂತ ಪವಿತ್ರವಾದ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯು ಭೂಲೋಕಕ್ಕೆ ಆಗಮಿಸಿ, ಭಕ್ತರ ಮನೆಗಳಿಗೆ ಭೇಟಿ ನೀಡುತ್ತಾಳೆ ಎಂಬ ಬಲವಾದ ನಂಬಿಕೆಯಿದೆ. ಹೀಗಾಗಿಯೇ, ಸಂಜೆ ಸಮಯದಲ್ಲಿ ಕೆಲವು ವಸ್ತುಗಳನ್ನು ಇತರರಿಗೆ ಕೊಡುವುದನ್ನು ಅಥವಾ ಸಾಲವಾಗಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಹಣ, ಉಪ್ಪು ಮತ್ತು ಹಾಲನ್ನು ಸಂಜೆ ಸೂರ್ಯಾಸ್ತದ ನಂತರ ಯಾರಿಗೂ ಸಾಲವಾಗಿ ನೀಡಬಾರದು ಎಂದು ಹಿರಿಯರು ಹೇಳುತ್ತಾರೆ. ಇದರ ಹಿಂದಿರುವ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಕಾರಣಗಳ ಬಗ್ಗೆ ತಿಳಿಯೋಣ.
ಸಂಜೆ ವೇಳೆ ಹಣವನ್ನು ಸಾಲವಾಗಿ ನೀಡಬಾರದು
ಹಣವನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ಸಂಜೆ ಸಮಯದಲ್ಲಿ ಮನೆಯ ಧನವನ್ನು ಅಥವಾ ಹಣವನ್ನು ಸಾಲದ ರೂಪದಲ್ಲಿ ಮತ್ತೊಬ್ಬರಿಗೆ ನೀಡುವುದರಿಂದ, ನಾವೇ ಸ್ವತಃ ನಮ್ಮ ಮನೆಯ ಲಕ್ಷ್ಮಿಯನ್ನು ಹೊರಗೆ ಕಳುಹಿಸಿದಂತಾಗುತ್ತದೆ. ಇದು ಮನೆಯಲ್ಲಿ ದಾರಿದ್ರ್ಯಕ್ಕೆ ಕಾರಣವಾಗುತ್ತದೆ ಮತ್ತು ಸಂಪತ್ತು ವೃದ್ಧಿಯಾಗುವುದನ್ನು ತಡೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಉಪ್ಪನ್ನು ಸಾಲವಾಗಿ ಕೊಡುವುದು ಮಹಾಪಾಪ
ಉಪ್ಪು ಕೇವಲ ಅಡುಗೆಯ ವಸ್ತುವಲ್ಲ, ಅದು ಸಮುದ್ರ ಮಂಥನದ ಸಮಯದಲ್ಲಿ ಲಕ್ಷ್ಮಿ ದೇವಿಯ ಜೊತೆಯಲ್ಲೇ ಉದ್ಭವಿಸಿದ ದೈವಿಕ ಅಂಶವನ್ನು ಹೊಂದಿದೆ. ಶಾಸ್ತ್ರಗಳ ಪ್ರಕಾರ ಉಪ್ಪು ಶುಕ್ರ ಗ್ರಹ ಮತ್ತು ಚಂದ್ರ ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಸಂಜೆ ವೇಳೆ ಉಪ್ಪನ್ನು ಸಾಲವಾಗಿ ನೀಡುವುದರಿಂದ ಮನೆಯಲ್ಲಿರುವ ಸೌಭಾಗ್ಯ ಮತ್ತು ಆರ್ಥಿಕ ವೃದ್ಧಿ ಕುಂಠಿತಗೊಳ್ಳುತ್ತದೆ. ಹಾಗೆಯೇ ಉಪ್ಪನ್ನು ಸಾಲವಾಗಿ ಪಡೆದರೆ ಅಥವಾ ನೀಡಿದರೆ, ಉಭಯ ಕುಟುಂಬಗಳ ನಡುವೆ ಸಾಲದ ಹೊರೆ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸುತ್ತದೆ.
ಹಾಲನ್ನು ಕೊಡುವುದರಿಂದ ಜಾತಕದಲ್ಲಿ ದೋಷ
ಹಾಲು ಬಿಳಿ ಬಣ್ಣದ್ದಾಗಿದ್ದು, ಇದು ನೇರವಾಗಿ ಚಂದ್ರ ಗ್ರಹ ಹಾಗೂ ಲಕ್ಷ್ಮಿ ದೇವಿಗೆ ಪ್ರಿಯವಾದ ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತದೆ. ಮುಸ್ಸಂಜೆ ವೇಳೆ ಹಾಲನ್ನು ಯಾರಿಗಾದರೂ ಉಚಿತವಾಗಿ ಅಥವಾ ಸಾಲವಾಗಿ ನೀಡಿದರೆ, ನಿಮ್ಮ ಜಾತಕದಲ್ಲಿ ಚಂದ್ರ ಮತ್ತು ಶುಕ್ರನ ಬಲ ಕ್ಷೀಣಿಸುತ್ತದೆ. ಇದರಿಂದ ಮನಸ್ಸಿಗೆ ಅಶಾಂತಿ, ಕೌಟುಂಬಿಕ ಕಲಹ ಮತ್ತು ಆರ್ಥಿಕ ನಷ್ಟ ಎದುರಾಗುತ್ತದೆ ಎಂಬ ನಂಬಿಕೆಯಿದೆ.
ಮುಸ್ಸಂಜೆ ವೇಳೆ ನೆನಪಿಡಬೇಕಾದ ಪ್ರಮುಖ ಅಂಶಗಳು:
ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸುವುದು ಅಥವಾ ಕಸವನ್ನು ಹೊರಗೆ ಹಾಕುವುದು ಮಾಡಬಾರದು.
ಲಕ್ಷ್ಮಿ ದೇವಿಗೆ ಶಾಂತ ಮತ್ತು ಪ್ರಸನ್ನ ವಾತಾವರಣ ಇಷ್ಟ.ಹಾಗಾಗಿ ಈ ಸಮಯದಲ್ಲಿ ಮನೆಯಲ್ಲಿ ಜಗಳ ಆಡುವುದು, ಅಳುವುದು ಅಥವಾ ಜೋರಾಗಿ ಕಿರುಚಾಡುವುದನ್ನು ಮಾಡಬಾರದು.
ಸಂಜೆ 6 ಗಂಟೆಯಾಗುತ್ತಿದ್ದಂತೆ ಮನೆಯ ಹೊಸ್ತಿಲಿಗೆ ಮತ್ತು ದೇವರ ಮನೆಗೆ ದೀಪ ಹಚ್ಚಿ ಕಪೂರ್ ಆರತಿ ಮಾಡುವುದರಿಂದ ಸಕಲ ಐಶ್ವರ್ಯವೂ ಸಿದ್ಧಿಸುತ್ತದೆ.



