ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ‘ರೆಸಾರ್ಟ್ ರಾಜಕೀಯ’ ಆರಂಭವಾಗಿದ್ದು, ಜೂನ್ 18 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಮುನ್ನ ಆಡಳಿತಾರೂಢ ಕಾಂಗ್ರೆಸ್ ತನ್ನ ಶಾಸಕರನ್ನು ಒಟ್ಟುಗೂಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ಹೊರವಲಯದ ಬಿಡದಿ ವಂಡರ್ಲಾ ರೆಸಾರ್ಟ್ನಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆದಿದ್ದು, ಚುನಾವಣೆ ಗೆಲುವಿಗಾಗಿ ತಂತ್ರ-ಪ್ರತಿತಂತ್ರಗಳ ಚರ್ಚೆ ನಡೆದಿದೆ.
ರೆಸಾರ್ಟ್ನಲ್ಲಿ ಶಾಸಕರಿಗೆ ಜಾಗರಣೆ:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುವ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ವಂಡರ್ಲಾ ಆವರಣದಲ್ಲಿರುವ ರೆಸಾರ್ಟ್ಗೆ ಕಾಂಗ್ರೆಸ್ನ ಎಲ್ಲಾ ಶಾಸಕರು ಹಾಗೂ ಪಕ್ಷಕ್ಕೆ ಬೆಂಬಲ ನೀಡಿರುವ ಪಕ್ಷೇತರ ಶಾಸಕರು ಆಗಮಿಸಿದ್ದಾರೆ. ಚುನಾವಣೆ ಮುಗಿಯುವವರೆಗೆ ಅಂದರೆ ಜೂನ್ 18 ರವರೆಗೆ ಎಲ್ಲಾ ಶಾಸಕರು ಇದೇ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದು, ಮತದಾನದ ದಿನದಂದು ಇಲ್ಲಿಂದಲೇ ನೇರವಾಗಿ ವಿಧಾನಸೌಧಕ್ಕೆ ತೆರಳಿ ಮತ ಚಲಾಯಿಸಲಿದ್ದಾರೆ.
ಜೆಡಿಎಸ್ ಆಪರೇಷನ್ಗೆ ಬ್ರೇಕ್:
ವಿಧಾನ ಪರಿಷತ್ನ 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಸಂಖ್ಯಾಬಲ ಇಲ್ಲದಿದ್ದರೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮೈತ್ರಿ ಬಲದೊಂದಿಗೆ ಸ್ಪರ್ಧೆ ನೀಡಿದೆ. ಜೆಡಿಎಸ್ನಿಂದ ಶಾಸಕರ ಕುದುರೆ ವ್ಯಾಪಾರ ನಡೆಯಬಹುದು ಎಂಬ ಆತಂಕದಿಂದಾಗಿ ಸಿಎಂ ಡಿ.ಕೆ. ಶಿವಕುಮಾರ್ ಶಾಸಕರನ್ನು ರೆಸಾರ್ಟ್ಗೆ ಶಿಫ್ಟ್ ಮಾಡುವ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದ್ದಾರೆ.
ಮತಗಳ ಹಂಚಿಕೆ ಸೂತ್ರ:
ಕಾಂಗ್ರೆಸ್ ಒಟ್ಟು 5 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಗೆಲುವಿಗೆ ತಲಾ 28 ರಿಂದ 29 ಮೊದಲ ಪ್ರಾಶಸ್ತ್ಯದ ಮತಗಳ ಅಗತ್ಯವಿದ್ದು, ಯಾವ ಶಾಸಕರು ಯಾರಿಗೆ ಮತ ಹಾಕಬೇಕು ಎಂಬುದರ ಸ್ಪಷ್ಟ ಜವಾಬ್ದಾರಿಯನ್ನು ಸಭೆಯಲ್ಲಿ ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ:
ಸಿಎಂ ಆಗಿ ಶಿವಕುಮಾರ್ ಮೊದಲ ಸಭೆ:
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಪ್ರಮುಖ ಶಾಸಕಾಂಗ ಪಕ್ಷದ ಸಭೆ ಇದಾಗಿದ್ದು, ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಎಲ್ಲಾ ನಾಯಕರಿಗೆ ಸೂಚಿಸಿದ್ದಾರೆ. ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಇತರ ಹಿರಿಯ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ಶಾಸಕರು ರೆಸಾರ್ಟ್ ವಾಸ್ತವ್ಯಕ್ಕೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರಾದರೂ, ಅಂತಿಮವಾಗಿ ಪಕ್ಷದ ಹಿತದೃಷ್ಟಿಯಿಂದ ಸಿಎಂ ಆದೇಶಕ್ಕೆ ಬದ್ಧರಾಗಿ ವಂಡರ್ಲಾದಲ್ಲಿ ಜಮಾಯಿಸಿದ್ದಾರೆ.



