ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಪ್ರಮುಖ ಬಿಜೆಪಿ ನಾಯಕ ಸತೀಶ್ ಪೂನಿಯಾಗೆ ರಾಜ್ಯಸಭಾ ಅಭ್ಯರ್ಥಿಯಾಗಿ ಬಡ್ತಿ ನೀಡಿರುವುದು ರಾಜಸ್ಥಾನದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ರಾಜೇಂದ್ರ ರಾಥೋಡ್ ಬೆಂಬಲಿಗರಲ್ಲಿ ಅಸಮಾಧಾನ
ಬಿಜೆಪಿಯ ಈ ನಿರ್ಧಾರದ ಬೆನ್ನಲ್ಲೇ ರಾಜಸ್ಥಾನ ರಾಜಕೀಯದ ಹಿರಿಯ ನಾಯಕ, 7 ಬಾರಿ ಶಾಸಕರಾಗಿರುವ ರಾಜೇಂದ್ರ ರಾಥೋಡ್ ನಡೆ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿವೆ. ರಾಥೋಡ್ರಂತಹ ಹಿರಿಯ ಮತ್ತು ಅನುಭವಿ ನಾಯಕರನ್ನು ಇನ್ನು ಎಷ್ಟು ದಿನ ಕಾಯಿಸಲಾಗುತ್ತದೆ, ಅವರ ಬದಲಿಗೆ ಇತರ ನಾಯಕರನ್ನು ಮುಂಚೂಣಿಗೆ ತರುತ್ತಿರುವುದರ ಹಿಂದಿನ ಮರ್ಮವೇನು ಎಂಬ ಪ್ರಶ್ನೆಗಳನ್ನು ಅವರ ಬೆಂಬಲಿಗರು ಕೇಳುತ್ತಿದ್ದಾರೆ.
ಜಾತಿ ಲೆಕ್ಕಾಚಾರದ ಆಯಾಮ
ಮಾಜಿ ಶಾಸಕ ರಾಜೇಂದ್ರ ಗುಢಾ ಇತ್ತೀಚಿನ ಹೇಳಿಕೆಗಳು ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿವೆ. ಸತೀಶ್ ಪೂನಿಯಾ ಕ್ಷಿಪ್ರ ರಾಜಕೀಯ ಬೆಳವಣಿಗೆಯನ್ನು ರಾಜೇಂದ್ರ ರಾಥೋಡ್ ದೀರ್ಘ ರಾಜಕೀಯ ಪಯಣಕ್ಕೆ ಹೋಲಿಸಿರುವ ಅವರು, ಈ ಇಡೀ ಬೆಳವಣಿಗೆಯನ್ನು ಜಾತಿಯ ಆಧಾರದ ಮೇಲೆ ವಿಶ್ಲೇಷಿಸಿದ್ದಾರೆ. ಪ್ರಭಾವಿ ಪಕ್ಷೇತರ ರಜಪೂತ್ ಶಾಸಕ ರವೀಂದ್ರ ಭಾಟಿ ಕೂಡ ರಾಥೋಡ್ ಹೆಸರನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ. ಸತೀಶ್ ಪೂನಿಯಾ ‘ಜಾಟ್’ ಸಮುದಾಯಕ್ಕೆ ಸೇರಿದವರಾಗಿದ್ದರೆ, ರಾಜೇಂದ್ರ ರಾಥೋಡ್ ಅವರು ‘ರಜಪೂತ್’ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ.
ಇದನ್ನೂ ಓದಿ:
ಗೆಹ್ಲೋಟ್-ಪೈಲಟ್ ನಡುವೆ ಸೌಹಾರ್ದದ ಮುನ್ಸೂಚನೆ?
ಇದೇ ವೇಳೆ ರಾಜಸ್ಥಾನ ಕಾಂಗ್ರೆಸ್ ವಲಯದಲ್ಲೂ ಮಹತ್ವದ ಬದಲಾವಣೆಗಳು ಕಾಣಿಸುತ್ತಿವೆ. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಜತೆಗಿನ ತಮ್ಮ ದೀರ್ಘಕಾಲದ ರಾಜಕೀಯ ವೈರತ್ವಕ್ಕೆ ಮುಕ್ತಾಯ ಹಾಡಲು ಮುಂದಾಗಿರುವಂತೆ ಕಾಣಿಸುತ್ತಿದೆ. ಈ ಬೆಳವಣಿಗೆಗಳು ರಾಜಸ್ಥಾನದ ರಾಜಕೀಯ ಒಳಸುಳಿಗಳನ್ನು ಮತ್ತಷ್ಟು ರೋಚಕಗೊಳಿಸಿವೆ.



