July 15, 2026
Wednesday, July 15, 2026
spot_img

ಬೆಳಗಾವಿಯಲ್ಲಿ ಭುಗಿಲೆದ್ದ ಭೂ ಸಂತ್ರಸ್ತರ ಆಕ್ರೋಶ: ಚನ್ನಮ್ಮ ವೃತ್ತದಲ್ಲಿ ದನಕರುಗಳೊಂದಿಗೆ ರೈತರ ಬೃಹತ್ ಪ್ರತಿಭಟನೆ!

ಹೊಸದಿಗಂತ ವರದಿ ಬೆಳಗಾವಿ

ಬೆಳಗಾವಿ: ಹಿಡಕಲ್ ಜಲಾಶಯದ ಭೂ ಸಂತ್ರಸ್ತರ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಧಿಕಾರಿಗಳ ನಿರಂತರ ವಿಳಂಬ ನೀತಿ ಹಾಗೂ ಕೋಟ್ಯಂತರ ರೂಪಾಯಿ ಲಂಚದ ಬೇಡಿಕೆಯನ್ನು ಖಂಡಿಸಿ, ನೂರಾರು ರೈತರು ತಮ್ಮ ದನಕರುಗಳೊಂದಿಗೆ ರಸ್ತೆಗಿಳಿದು  ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಭೂಮಿ ನೀಡಿ ಸಂತ್ರಸ್ತರಾದ ರೈತರು, ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಐತಿಹಾಸಿಕ ರಾಣಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು. ನೀರಾವರಿ ನಿಗಮದ ಮುಖ್ಯ ಅಭಿಯಂತರರ ಕಾರ್ಯಾಲಯದ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಸಂಚಾರ ವ್ಯತ್ಯಯಗೊಳಿಸಿದರು. ಬಳಿಕ ಅಧಿಕಾರಿಗಳ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗುತ್ತಾ ಬೃಹತ್ ಪ್ರತಿಭಟನಾ  ರ್ಯಾ ಲಿ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಪ್ರತಿಭಟಿಸಿದರು.

ಅಧಿಕಾರಿಗಳಿಂದ ಸಚಿವರಿಗೇ ತಪ್ಪು ಮಾಹಿತಿ ರೈತರ ಗಂಭೀರ ಆರೋಪ:

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿರಿಯ ರೈತ ಮುಖಂಡ ಬಾಳೇಶ್ ಮಾವನೂರ್ ಮಾತನಾಡಿ, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ನಮ್ಮ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹತ್ತಾರು ಬಾರಿ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಆದರೂ ನೀರಾವರಿ ನಿಗಮದ ಅಧಿಕಾರಿಗಳಾದ ರಾಜೇಶ್ ಅಮ್ಮಿನಭಾವಿ, ರಾಥೋಡ್, ಲಾಳೂರ ಹಾಗೂ ಪಟೇಲ್ ಮತ್ತಿತರರು ಸಚಿವರಿಗೂ ತಪ್ಪು ಮಾಹಿತಿ ನೀಡುತ್ತಾ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ. ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದಾಗಿ ನೂರಾರು ಎಕರೆ ಜಮೀನಿನ ಪರಿಹಾರ ಕಾರ್ಯ ನನೆಗುದಿಗೆ ಬಿದ್ದಿದೆ,” ಎಂದು ಅಸಮಾಧಾನ ಹೋರ ಹಾಕಿದರು.

ನಮ್ಮ ಹೋರಾಟ ಸರ್ಕಾರ ಅಥವಾ ಕಂದಾಯ ಇಲಾಖೆ ವಿರುದ್ಧವಲ್ಲ:

ಇದೇ ವೇಳೆ ಮತ್ತೊರ್ವ  ರೈತ ಮುಖಂಡ ಮಾತನಾಡಿ “ನಮ್ಮ ಹೋರಾಟ ಸರ್ಕಾರ ಹಾಗೂ ಕಂದಾಯ ಇಲಾಖೆಯ ವಿರುದ್ಧವಲ್ಲ. ಕೇವಲ ನೀರಾವರಿ ನಿಗಮದ ಭ್ರಷ್ಟ ಅಧಿಕಾರಿಗಳ ವಿರುದ್ಧ ಮಾತ್ರ ನಮ್ಮ ಹೋರಾಟ ನಿರಂತರವಾಗಿದೆ. ಕೇವಲ ಶೇ. 90 ರಷ್ಟು ದಾಖಲೆಗಳು ಎಸ್ಎಲ್ಓ ಕಾರ್ಯಾಲಯದಲ್ಲಿದ್ದರೂ, ಅಧಿಕಾರಿಗಳು ನಮಗೆ ತಪ್ಪು ರಿಪೋರ್ಟ್ ನೀಡಿ ವಂಚಿಸುತ್ತಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ. ಅಗತ್ಯಬಿದ್ದರೆ ಒಂದು ವರ್ಷವಾದರೂ ಇಲ್ಲೇ ಧರಣಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ,” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರೈತರೊಂದಿಗೆ ವಿಶೇಷ ಸಭೆಯ ಭರವಸೆ ನೀಡಿದ ಜಿಲ್ಲಾಧಿಕಾರಿ:

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು ರೈತರಗೆ ಅನ್ಯಾಯ ಯಾಗಿರುವುದುರ ಬಗ್ಗೆ ಪರಿಶೀಲನೆ ನಡೆಸಿ ಸುಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳು ನೀಡಿದ ಪ್ರಮುಖ ಭರವಸೆಗಳು:

ಪ್ರಸ್ತುತ ಸಮಸ್ಯೆಯ ತುರ್ತು ಪರಿಹಾರಕ್ಕಾಗಿ ನೀರಾವರಿ ನಿಗಮ ನಿಯಮಿತದ ಉತ್ತರ ವಲಯ ಮುಖ್ಯ ಇಂಜಿನಿಯರ್ ಅವರನ್ನು ಕಚೇರಿಗೆ ಕರೆಸಿ ವಿಶೇಷ ಸಭೆ ಆಯೋಜಿಸಲಾಗುವುದು.

ಇದನ್ನೂ ಓದಿ:

ರೈತ ಮುಖಂಡರಿಗೆ ಆಹ್ವಾನ:

ಸಭೆಯಲ್ಲಿ ಸಮಸ್ಯೆಯ ಕುರಿತು ಸಂಪೂರ್ಣ ಮಾಹಿತಿ ಹೊಂದಿರುವ ರೈತರ ಅಥವಾ ಪ್ರತಿಭಟನಾಕಾರರ 4 ರಿಂದ 5 ಪ್ರಮುಖ ಮುಖಂಡರು ಭಾಗವಹಿಸಬೇಕು.

ದಾಖಲೆಗಳ ಮುಖಾಮುಖಿ ಪರಿಶೀಲನೆ:

ಅಧಿಕಾರಿಗಳು ನೀಡಿರುವ ಉತ್ತರಗಳು ಹಾಗೂ ಅದಕ್ಕೆ ಆಧಾರವಾಗಿರುವ ದಾಖಲೆಗಳನ್ನು ಮುಖಂಡರ ಸಮ್ಮುಖದಲ್ಲೇ ಪರಿಶೀಲಿಸಲಾಗುವುದು. ರೈತರ ಪ್ರಕಾರ ವರದಿಯಲ್ಲಿರುವ ಕೊರತೆಗಳ ಬಗ್ಗೆ ಮುಕ್ತ ಚರ್ಚೆ ನಡೆಸಲಾಗುವುದು.

ಸರ್ಕಾರಕ್ಕೆ ಪ್ರತ್ಯೇಕ ವರದಿ:

ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಗತ್ಯ ಬಿದ್ದರೆ ಜಿಲ್ಲಾಡಳಿತದ ಕಡೆಯಿಂದಲೂ ಸರ್ಕಾರಕ್ಕೆ ಪ್ರತ್ಯೇಕ ವರದಿಯನ್ನು ಕಳುಹಿಸಲಾಗುವುದು.

ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿಸಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ರೈತರು ತಮ್ಮ ದನಕರುಗಳು, ಕುಟುಂಬಸ್ಥರೊಂದಿಗೆ ನ್ಯಾಯಕ್ಕಾಗಿ ಆಗ್ರಹಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !