ಹೊಸದಿಗಂತ ವರದಿ ಮಡಿಕೇರಿ
ಮಡಿಕೇರಿ: ಹೆಣ್ಣಾನೆಯೊಂದು ಕಾಫಿ ತೋಟದ ಮಧ್ಯೆ ಸಂಶಯಾಸ್ಪದ ರೀತಿಯಲ್ಲಿ ಸತ್ತು ಬಿದ್ದಿರುವ ಘಟನೆ ವೀರಾಜಪೇಟೆ ತಾಲೂಕಿನ ಆನಂದಪುರ ಸಮೀಪದ ಕೌರಿಕಾಡು ಎಸ್ಟೇಟ್’ನಲ್ಲಿ ನಡೆದಿದೆ.
ಆನೆಯ ಚೀರಾಟ ಕೇಳಿ ಸ್ಥಳಕ್ಕೆ ತೆರಳಿದ ಸಾರ್ವಜನಿಕರಿಗೆ ಆನೆಯೊಂದು ಸತ್ತು ಬಿದ್ದಿರುವ ಹಾಗೂ ಪಕ್ಕದಲ್ಲೇ ಮರಿಯಾನೆ ಚಿರಾಡುತ್ತಿದ್ದ ದೃಶ್ಯ ಕಂಡುಬಂದಿದೆ.
ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಯಿಯನ್ನು ಕಳೆದುಕೊಂಡಿರುವ ಮರಿಯಾನೆ ಜಾಗ ಬಿಟ್ಟು ಕದಲದೆ ಕಣ್ಣೀರು ಹಾಕುತ್ತಾ ಸೊಂಡಿಲಿನಿಂದ ಮೃತ ದೇಹವನ್ನು ಸವರುತ್ತಾ ಮೂಕ ರೋದನೆ ಅನುಭವಿಸುತ್ತಿರುವ ದೃಶ್ಯ ಎಲ್ಲರ ಮನಕಲಕುವಂತಿದೆ.
ಇದನ್ನೂ ಓದಿ:
ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾದ ಆನೆ ಗುಂಡು ತಗಲಿ ಸತ್ತಿದೆಯೋ ಅಥವಾ ಅನಾರೋಗ್ಯದ ಕಾರಣದಿಂದ ಮೃತ ಪಟ್ಟಿದೆಯೋ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಆನೆಯ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.



