ಹೊಸದಿಗಂತ ವಿಟ್ಲ:
ಇಡ್ಕಿದು ಗ್ರಾಮದ ಕೊಡಂಗೆಯಲ್ಲಿ ಮನೆಯೊಂದರಲ್ಲಿ ತಂಡವೊಂದು 2.60ಲಕ್ಷ ಮೌಲ್ಯದ ಚಿನ್ನದ ಸರವನ್ನು ದರೋಡೆ ನಡೆಸಿದ್ದು, ಪಕ್ಕದ ಕೊಡಂಚಪಾಲು ಎಂಬಲ್ಲಿ ಮನೆಯಂಗಳದಲ್ಲಿ ನಿಲ್ಲಿಸಿದ ದ್ವಿಚಕ್ರವಾಹನ ಕಳ್ಳತನವಾದ ಬಗ್ಗೆ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಕೃತ್ಯವನ್ನು ಒಂದೇ ತಂಡ ಎಸಗಿರುವ ಸಾಧ್ಯತೆಯ ಮೇರೆಗೆ ತನಿಖೆಯನ್ನು ನಡೆಸಲಾಗುತ್ತಿದೆ.
ಕೋಲ್ಪೆ ಕೊಡಂಗೆ ನಿವಾಸಿ ಡಾ. ಸೂರ್ಯನಾರಾಯಣ ಭಟ್ (79) ಅವರು ಪುತ್ರ, ಸೊಸೆ ಹಾಗೂ ಮೊಮ್ಮಕಳ ಜತೆಗೆ ವಾಸವಾಗಿದ್ದು, ಜು.೨೫ರಂದು ತಳ ಅಂತಸ್ಥಿನಲ್ಲಿ ಮಲಗಿದ್ದಾಗ, ತಡರಾತ್ರಿ ಅಪರಿಚಿತರಿಬ್ಬರು ಮನೆಯೊಳಗೆ ನುಗ್ಗಿ, ಕುತ್ತಿಗೆಯಲ್ಲಿದ್ದ ಸುಮಾರು 20ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು, ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆಂದು ವಿಟ್ಲ ಠಾಣೆಗೆ ನೀಡಿದ ದೂರಿನ ಪ್ರಕಾರಣ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಬಂಟ್ವಾಳ ಉಪಾಧೀಕ್ಷಕ ಯಶ್ ಕುಮಾರ್ ಶರ್ಮ, ವಿಟ್ಲ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ, ಉಪನಿರೀಕ್ಷಕ ರಾಮಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಕ್ಕದಲ್ಲೇ ದ್ವಿಚಕ್ರ ಕಳ್ಳತನ
ಇಡ್ಕಿದು ಕೊಡಂಚರಪಾಲು ನಿವಾಸಿ ಆನಂದ ಸಪಲ್ಯ (53) ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಜು.೨೬ರಂದು ಬೆಳಿಗ್ಗೆ ನೋಡಿದಾಗ ಕಾಣೆಯಾಗಿದ್ದು, ಸುತ್ತಮುತ್ತಲಿನ ಪರಿಸರದಲ್ಲಿ ವಿಚಾರಿಸಿದರೂ ವಾಹನ ಪತ್ತೆಯಾಗದ ಹಿನ್ನಲೆ ವಿಟ್ಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.



