September 19, 2026
Saturday, September 19, 2026
spot_img

ಹಾಡಹಗಲೇ ಮಹಿಳೆಯ ಕತ್ತು ಸೀಳಿ ಕೊ*ಲೆ: ಪರಾರಿಯಾಗುತ್ತಿದ್ದ ಹಂತಕನನ್ನು ಹಿಡಿದ ಸ್ಥಳೀಯರು

ಹೊಸದಿಗಂತ ವರದಿ ದಾವಣಗೆರೆ:

ಒಬ್ಬಂಟಿಯಾಗಿದ್ದ ಮಹಿಳೆಯನ್ನು ಮನೆಯ ಮೇಲ್ಮಹಡಿಗೆ ಕರೆದೊಯ್ದು ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಶೇಖರಪ್ಪ ಬಡಾವಣೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ ನಾಯ್ಕ (47) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹತ್ಯೆಯಾದ ಮಹಿಳೆಯನ್ನು ಜಗಳೂರು ಮೂಲದ ನಾಗರತ್ನಮ್ಮ (50) ಎಂದು ಗುರುತಿಸಲಾಗಿದೆ. ಮೂವರು ಮಕ್ಕಳೊಂದಿಗೆ ವಾಸವಾಗಿದ್ದ ನಾಗರತ್ನಮ್ಮ ಒಬ್ಬಂಟಿಯಾಗಿದ್ದ ವೇಳೆ ಮನೆಗೆ ಬಂದ ನಾಗರಾಜ ನಾಯ್ಕ, ಆಕೆಯನ್ನು ಮೇಲ್ಮಹಡಿಗೆ ಕರೆದೊಯ್ದು ಮಾತುಕತೆ ನಡೆಸಿದ್ದಾನೆ. ಬಳಿಕ ಹರಿತವಾದ ಆಯುಧದಿಂದ ಕುತ್ತಿಗೆ ಸೀಳಿ ಪರಾರಿಯಾಗಲು ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ನಾಗರತ್ನಮ್ಮ ಮನೆಯ ಹೊಸ್ತಿಲಿಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ:

ಆರೋಪಿ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯ ಯುವಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಗರತ್ನಮ್ಮ ಹಾಗೂ ನಾಗರಾಜ ನಾಯ್ಕ ನಡುವೆ ಈ ಹಿಂದೆ ವಿವಾದವಿದ್ದು, ಇಬ್ಬರೂ ಪರಸ್ಪರ ದೂರು–ಪ್ರತಿದೂರು ನೀಡಿದ್ದರು. ಮಹಿಳೆ ಮೇಲಿನ ದೌರ್ಜನ್ಯ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಡಾ. ಹೆಚ್.ಟಿ. ಶೇಖರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಇಬ್ಬರಿಗೂ ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಆರೋಪಿ ಮತ್ತೆ ಮನೆಗೆ ಬಂದು ಕಿರುಕುಳ ನೀಡಿದ್ದು, ಮಹಿಳೆ ವಿರೋಧಿಸಿದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !