August 4, 2026
Tuesday, August 4, 2026
spot_img

ರಾಜೀನಾಮೆ ನೀಡುವುದಿಲ್ಲ: ಸಿಎಂ ಭೇಟಿ ಬಳಿಕ ಶಾಸಕ ಬೇಳೂರು ಗೋಪಾಲಕೃಷ್ಣ ಯೂ-ಟರ್ನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಂತ್ರಿಗಿರಿ ಕೈತಪ್ಪಿದ್ದಕ್ಕೆ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಕೊನೆಗೂ ಶಾಂತರಾಗಿದ್ದು, ಸಿಎಂ ಭೇಟಿ ಬಳಿಕ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.‌

ರಾಜೀನಾಮೆ ನಿರ್ಧಾರಕ್ಕೆ ಕಾರಣವೇನು?

ತಮ್ಮ ಅಸಮಾಧಾನಕ್ಕೆ ಕಾರಣ ಬಿಚ್ಚಿಟ್ಟ ಬೇಳೂರು ಗೋಪಾಲಕೃಷ್ಣ, “ಹಿಂದೆ ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಕಟ್ಟುನಿಟ್ಟಿನ ಭರವಸೆ ನೀಡಲಾಗಿತ್ತು. ಆದರೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲೂ ನನಗೆ ಸ್ಥಾನ ಸಿಗದೇ ಇದ್ದಾಗ ಸಹಜವಾಗಿಯೇ ನನಗೂ ಮತ್ತು ನನ್ನ ಕ್ಷೇತ್ರದ ಜನರಿಗೂ ತೀವ್ರ ನಿರಾಶೆಯಾಗಿತ್ತು. ಈ ಬೇಸರದಿಂದಾಗಿಯೇ ನಾನು ನಿನ್ನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕಠಿಣ ನಿರ್ಧಾರ ಕೈಗೊಂಡಿದ್ದೆ” ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.


ಹೈಡ್ರಾಮಾಗೆ ಬ್ರೇಕ್ ಹಾಕಿದ ಸಿಎಂ ಸಂಧಾನ ಸೂತ್ರ:

ಶಾಸಕರ ರಾಜೀನಾಮೆ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಅಲರ್ಟ್ ಆದ ಮುಖ್ಯಮಂತ್ರಿ ಡಿಕೆಶಿ ನಿನ್ನೆ ತಡರಾತ್ರಿ ಖುದ್ದಾಗಿ ಬೇಳೂರು ಗೋಪಾಲಕೃಷ್ಣಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಯಾವುದೇ ಆತುರದ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ ಸಿಎಂ, ಇಂದು ಬೆಳಿಗ್ಗೆ ಮುಖಾಮುಖಿ ಚರ್ಚೆಗೆ ಆಹ್ವಾನಿಸಿದ್ದರು. ಅದರಂತೆ ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಬೇಲೂರು ಗೋಪಾಲಕೃಷ್ಣ ಶಾಂತರಾಗಿದ್ದಾರೆ.

ಇದನ್ನೂ ಓದಿ:

ಪಕ್ಷ ನಿಷ್ಠೆಗೆ ಶಾಸಕ ಶರಣು – ನಿರ್ಧಾರ ವಾಪಸ್:

ಮುಖ್ಯಮಂತ್ರಿಗಳ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ರಾಜೀನಾಮೆ ನೀಡದಿರಲು ನಿರ್ಧರಿಸಿದ್ದೇನೆ. ಇದು ಇನ್ನು ಮುಂದೆ ಕೇವಲ ಅಧಿಕಾರ ಅಥವಾ ಸಚಿವ ಸ್ಥಾನದ ವಿಚಾರವಲ್ಲ. ಸಿಎಂ ನನ್ನೊಂದಿಗೆ ಮಾತನಾಡಿದ್ದಾರೆ ಮತ್ತು ಪಕ್ಷದ ಹಿತದೃಷ್ಟಿಯಿಂದ ನಾನು ನನ್ನ ನಿರ್ಧಾರವನ್ನು ಬದಲಿಸಿಕೊಂಡಿದ್ದೇನೆ” ಎಂದು ತಿಳಿಸುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿದ್ದ ಆತಂಕವನ್ನು ದೂರ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !