ಹೊಸದಿಗಂತ ಡಿಜಿಟಲ್ ಡೆಸ್ಕ್:
10 ವರ್ಷ… ಇಷ್ಟು ದೀರ್ಘ ಕಾಲ ತಮ್ಮವರಿಗಾಗಿ ಕಾದಿದ್ದ ಕುಟುಂಬಕ್ಕೆ ಕೊನೆಗೂ ಆ ಸಂತಸದ ಕ್ಷಣ ಕಣ್ಮುಂದೆ ಬಂದಿದೆ. ಎಲ್ಲಿದ್ದಾರೆ, ಹೇಗಿದ್ದಾರೆ ಎಂಬುದೇ ತಿಳಿಯದೆ ಕಳೆದುಹೋಗಿದ್ದ ವ್ಯಕ್ತಿಯೊಬ್ಬರು ಮತ್ತೆ ಕುಟುಂಬದವರ ಮುಂದೆ ನಿಂತಿದ್ದಾರೆ. ಆದರೆ ಅವರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಿಕ್ಕಿದ್ದು ದೊಡ್ಡ ಸುಳಿವೇನಲ್ಲ ಡೈರಿಯಲ್ಲಿ ಬರೆದಿದ್ದ ಒಂದೇ ಒಂದು ಪದ. ಆ ಒಂದು ಪದವೇ ಹತ್ತು ವರ್ಷಗಳ ಹುಡುಕಾಟಕ್ಕೆ ಕೊನೆ ಹಾಡಿದೆ.
ಬೀದಿಯಲ್ಲಿ ಅಲೆದಾಡುತ್ತಿದ್ದ ವ್ಯಕ್ತಿ
ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಮಜ್ಖಾಲಿ ಮತ್ತು ತರಿಖೇತ್ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ವ್ಯಕ್ತಿಯೊಬ್ಬರು ಅಲೆದಾಡುತ್ತಿದ್ದರು. ತಮ್ಮ ಹೆಸರು, ವಿಳಾಸ ಅಥವಾ ಕುಟುಂಬದ ಬಗ್ಗೆ ಅವರಿಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಕಾಣೆಯಾದವರು ಮತ್ತು ನಿರ್ಗತಿಕರ ಪತ್ತೆಗಾಗಿ ಪೊಲೀಸರು ನಡೆಸುತ್ತಿದ್ದ ವಿಶೇಷ ಅಭಿಯಾನದ ವೇಳೆ ಉಪನಿರೀಕ್ಷಕ ವಿನೋದ್ ಫರ್ಟ್ಯಾಲ್ ಅವರ ಗಮನಕ್ಕೆ ಈ ವ್ಯಕ್ತಿ ಬಂದಿದ್ದಾರೆ.
ಮಾತುಕತೆಯಿಂದ ಸಿಗದ ಮಾಹಿತಿ
ಪೊಲೀಸರು ಅವರನ್ನು ಪೊಲೀಸ್ ಔಟ್ಪೋಸ್ಟ್ಗೆ ಕರೆತಂದು ಹಲವು ಬಾರಿ ಮಾತನಾಡಿಸಿದ್ದಾರೆ. ಆದರೆ ಕುಟುಂಬ ಅಥವಾ ಊರಿನ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ದೊರೆಯಲಿಲ್ಲ. ನಂತರ ಅಧಿಕಾರಿಯೊಬ್ಬರು ವಿಭಿನ್ನ ಪ್ರಯತ್ನಕ್ಕೆ ಮುಂದಾದರು.
ಇದನ್ನೂ ಓದಿ:
ಡೈರಿಯಲ್ಲಿ ಬರೆದ ಒಂದೇ ಒಂದು ಪದ!
ವ್ಯಕ್ತಿಗೆ ಡೈರಿ ಮತ್ತು ಪೆನ್ ನೀಡಿ, ನೆನಪಿರುವ ಯಾವುದೇ ಸ್ಥಳ ಅಥವಾ ಮಾಹಿತಿಯನ್ನು ಬರೆಯುವಂತೆ ಕೇಳಲಾಯಿತು. ಆಗ ಅವರು ಡೈರಿಯಲ್ಲಿ ಕೇವಲ “ರಾಜೇಪುರ” ಎಂಬ ಒಂದೇ ಪದ ಬರೆದಿದ್ದಾರೆ. ಇದೇ ಪದ ಪೊಲೀಸರಿಗೆ ಮಹತ್ವದ ಸುಳಿವಾಯಿತು.
ನಾಲ್ಕೇ ದಿನಗಳಲ್ಲಿ ಕುಟುಂಬದ ಪತ್ತೆ
ಪೊಲೀಸರು ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ ರಾಜೇಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ವ್ಯಕ್ತಿಯ ಫೋಟೋ ಮತ್ತು ಲಭ್ಯವಿದ್ದ ಮಾಹಿತಿಯನ್ನು ಹಂಚಿಕೊಂಡರು. ಸುಮಾರು ನಾಲ್ಕು ದಿನಗಳ ವಿಚಾರಣೆ ಬಳಿಕ ಆ ವ್ಯಕ್ತಿಯನ್ನು ಶ್ಯಾಮ್ ಸಿಂಗ್ ಎಂದು ಗುರುತಿಸಲಾಯಿತು. ಬಳಿಕ ಅವರ ಕುಟುಂಬದ ವಿಳಾಸವನ್ನು ಪತ್ತೆಹಚ್ಚಲಾಯಿತು.
ಮಾಹಿತಿ ದೊರೆತ ಕೂಡಲೇ ಶ್ಯಾಮ್ ಸಿಂಗ್ ಅವರ ಪುತ್ರ ಹಾಗೂ ಸಂಬಂಧಿಕರು ಉತ್ತರ ಪ್ರದೇಶದಿಂದ ಮಜ್ಖಾಲಿಗೆ ಬಂದರು. ಸುಮಾರು 10 ವರ್ಷಗಳ ಬಳಿಕ ಕುಟುಂಬ ಸದಸ್ಯರು ತಮ್ಮವರನ್ನು ಮತ್ತೆ ಕಂಡು ಭಾವುಕರಾದರು.
ಕುಟುಂಬದವರ ಪ್ರಕಾರ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಶ್ಯಾಮ್ ಸಿಂಗ್ ಸುಮಾರು ಒಂದು ದಶಕದ ಹಿಂದೆ ಮನೆಯಿಂದ ಹೊರಟಿದ್ದರು. ಸಾಕಷ್ಟು ಹುಡುಕಾಟ ನಡೆಸಿದರೂ ಸುಳಿವು ಸಿಗದ ಕಾರಣ ಕುಟುಂಬದವರು ಅವರನ್ನು ಮತ್ತೆ ನೋಡುವ ನಿರೀಕ್ಷೆಯನ್ನೇ ಕಳೆದುಕೊಂಡಿದ್ದರು.
ಈ ಪ್ರಕರಣವು ಪೊಲೀಸರು ಕೇವಲ ಕಾನೂನು ಪಾಲನೆ ಮಾಡುವುದಷ್ಟೇ ಅಲ್ಲದೆ, ಮಾನವೀಯತೆ ಮತ್ತು ವಿಭಿನ್ನ ರೀತಿಯ ಚಿಂತನೆಯ ಮೂಲಕ ಕುಟುಂಬಗಳನ್ನು ಮತ್ತೆ ಒಂದಾಗಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.



