ಹೊಸದಿಗಂತ ವರದಿ ಮಂಡ್ಯ:
ನ್ಯಾಯಾಲಯದ ಅನುಮತಿ ಇಲ್ಲದೆ ವಿಚಾರಣಾಧೀನ ಖೈದಿಯೊಬ್ಬನಿಗೆ ಆಸ್ಪತ್ರೆಗೆ ದಾಖಲಾಗಲು ಅವಕಾಶ ಮಾಡಿಕೊಟ್ಟ ಪ್ರಕರಣ ಅಚ್ಚ ಹಸಿರಾಗಿರುವಾಗಲೇ ಮಂಡ್ಯ ಜಿಲ್ಲಾ ಕಾರಾಗೃಹದ ಮತ್ತೊಂದು ಕರ್ಮಕಾಂಡ ಬಯಲಾಗಿದೆ.
ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ಕಲ್ಪಿಸಲು ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಒಂದೊಂದು ರೇಟ್ ಫಿಕ್ಸ್ ಮಾಡಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಜೈಲಿನಿಂದಲೇ 20 ವಿಚಾರಣಾಧೀನ ಖೈದಿಗಳು ಬರೆದಿದ್ದಾರೆನ್ನಲಾದ ಪತ್ರ ಇದಾಗಿದ್ದು, ಖೈದಿ ನಂಬರ್ಗಳನ್ನು ಹಾಕಿ ಹೆಬ್ಬೆಟ್ಟಿನ ಗುರುತಿನ ಜತೆ ಸಹಿ ಮಾಡಿರುವ ಪತ್ರ ಇದಾಗಿದೆ.

ಪತ್ರದಲ್ಲಿ ಇರುವುದೇನು?
ಜಿಲ್ಲಾ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳು ಕಾರಾಗೃಹ ಅಧೀಕ್ಷಕಿ ಎಂ.ಶಾಂತಮ್ಮ ನೇತೃತ್ವದಲ್ಲೇ ನಡೆಯುತ್ತಿವೆ. ಜೈಲಿನ ಸಿಬ್ಬಂದಿಗಳಾದ ಅನಿಲ, ರವಿ, ಶಿವರಾಜು ಇವರನ್ನು ಬಳಸಿಕೊಂಡು ಪ್ರತಿ ಸೆಲ್ಗಳಿಂದಲೂ ಹಣ ವಸೂಲಿ ಮಾಡುತ್ತಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:
ಒಂದು ಕೆಜಿ ಮಟನ್ಗೆ 1250 ರೂ., ಒಂದು ಕೆಜಿ ಕೋಳಿ ಮಾಂಸಕ್ಕೆ 700 ರೂ. ವಸೂಲಿ ಮಾಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಧ್ವಜಾರೋಹಣಕ್ಕೆ 1 ಲಾಡುಗೆ 25 ರೂ.ನಂತೆ ಪಡೆದುಕೊಂಡು 200 ಲಾಡು ಹಂಚಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



