ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ಬಾಂಬೆ ಹೈ ಕೋರ್ಟ್ ಮಹತ್ವದ ಆದೇಶ ನೀಡಿದೆ.
ದಿಶಾ ಸಾಲಿಯನ್ ಸಾವಿನ ಪ್ರಕರಣವನ್ನು ಸಿಬಿಐ ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ. ದಿಶಾ ಸಾಲಿಯಾನ್ ತಂದೆ ಸತೀಶ್ ಸಾಲಿಯಾನ್ ಅವರು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರ ಕೊಲೆಯಾಗಿದೆ. ಸಾವಿನ ತನಿಖೆ ವಿಚಾರವಾಗಿ ಮುಂಬೈ ಪೊಲೀಸರು ಲೋಪ ಎಸಗಿದ್ದಾರೆ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಾರಂಗ್ ವಿ. ಕೋತ್ವಾಲ್ ಮತ್ತು ನ್ಯಾಯಮೂರ್ತಿ ರಂಜಿತ್ ಸಿನ್ಹ ರಾಜ ಭೋಸಲೆ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ ಪೀಠ ಇಂದು ಆದೇಶ ಪ್ರಕಟಿಸಿದೆ.
ದಿಶಾ ಸಾಲಿಯಾನ್ ಪ್ರಕರಣದ ಡೀಟೇಲ್ಸ್
2020ರ ಜೂನ್ ಎಂಟರಂದು ದಿಶಾ ಸಾಲಿಯಾನ್ 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಇದಾದ ಕೆಲವೇ ದಿನಗಳಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ತಮ್ಮ ಬಾಂದ್ರಾದ ನಿವಾಸದಲ್ಲಿ ಮೃತಪಟ್ಟಿದ್ದರು. ಈ ಎರಡೂ ಸಾವುಗಳ ನಡುವೆ ಕನೆಕ್ಷನ್ ಇದೆ ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದ ಹಲವು ಸಾಕ್ಷ್ಯಗಳು ಲಭ್ಯವಾಗಿದ್ದವು.
ಹಿರಿಯ ಅಧಿಕಾರಿಯ ನೇತೃತ್ವ
ಕೇಸ್ನ ಪರ ವಿರೋಧ ಆಲಿಸಿದ ಪೀಠ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂಬೈನ ಮಾಲ್ವಾಣಿ ಪೊಲೀಸ್ ಠಾಣೆ ಸಿಬಿಐಗೆ ಹಸ್ತಾಂತರಿಸಬೇಕು. ಜತೆಗೆ ತನಿಖೆಯ ನೇತೃತ್ವವನ್ನು ಹಿರಿಯ ಅಧಿಕಾರಿಗಳು ವಹಿಸಿಕೊಳ್ಳಬೇಕು. ತನಿಖೆಯ ವೇಳೆ ಯಾರ ವಿರುದ್ಧ ಸಾಕ್ಷ್ಯಗಳು ದೊರೆಯುತ್ತವೆಯೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಾಕ್ಷ್ಯಾಧಾರಗಳಿಲ್ಲದೇ ಯಾರನ್ನೂ ಆರೋಪಿಯನ್ನಾಗಿ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದಿಶಾ ಪರ ವಕೀಲರು ಹೇಳೋದೇನು?
ಪ್ರಭಾವಿ ವ್ಯಕ್ತಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅರ್ಜಿದಾರರಾದ ಸತೀಶ್ ಸಾಲಿಯಾನ್ ತಮ್ಮ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ, ನಂತರ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತ ಸತ್ಯ ಹೊರಬರಬೇಕಿದೆ. ಸಿಐಡಿ ತನಿಖೆಯಿಂದ ಎಲ್ಲವೂ ಪಾರದರ್ಶಕವಾಗಿರಲಿದೆ ಎಂದಿದ್ದಾರೆ.
ಪೋಸ್ಟ್ಪಾರ್ಟಂ ವರದಿಯಲ್ಲಿ ಏನಿತ್ತು?
14ನೇ ಮಹಡಿಯಿಂದ ಬಿದ್ದು ದಿಶಾ ಮೃತಪಟ್ಟಿದ್ದರೆ ಆಕೆಯ ಮುಖಕ್ಕೆ ಒಂದೂ ಗಾಯವಾಗಿಲ್ಲ. ಇದು ಅನುಮಾನಾಸ್ಪದವಾಗಿದೆ. ಅಷ್ಟು ಮೇಲಿನಿಂದ ಬಿದ್ದಾಗ ಬರೀ ಒಂದೆರಡು ಹಲ್ಲು ಮುರಿದಿವೆ ಎಂದಷ್ಟೇ ಬರೆಯಲಾಗಿತ್ತು. ಇನ್ನು ದಿಶಾ ತಂದೆ ಮುಂಬೈ ಪೊಲೀಸರ ಬಳಿ ತೆರಳಿ ಮಗಳ ರೇಪ್ ಹಾಗೂ ಮರ್ಡರ್ ಆಗಿದೆ ಎಂದು ಆರೋಪ ಮಾಡಿದಾಗ ಯಾಕೆ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎನ್ನುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.



