ಹೊಸದಿಗಂತ ವರದಿ ರಾಯಚೂರು :
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕನಲ್ಲಿ ಭೀಕರ ಬರಗಾಲ ಬಿದ್ದಿದ್ದರೂ ಈ ತಾಲೂಕನ್ನು ಭಾಗಶಃ ಬರಗಾಲ ಎಂದು ಘೋಷಿಸಲಾಗಿದೆ. ಈ ತಾಲೂಕನ್ನು ಸಂಪೂರ್ಣ ಬರಗಾಲ ಎಂದು ಘೋಷಣೆ ಮಾಡುವವರೆಗೂ ಸರ್ಕಾರವನ್ನು ಬಿಡುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣದಲ್ಲಿ ಸ್ಪಂದಿಸಿದ್ದರು. ಆದರೆ ಈ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈ ಸರ್ಕಾರವನ್ನು ಮನೆಗೆ ಕಳಿಸುವವರೆಗೂ ನಾವೆಲ್ಲ ಸೇರಿ ಹೋರಾಡೋಣ ಎಂದರು.
ಈ ಸರ್ಕಾರ ದಲಿತ ವಿರೋಧಿ, ಮಹಿಳಾ ವಿರೋಧಿ, ರೈತ ವಿರೋಧಿಯಾಗಿದೆ. ದಲಿತರ ಅನುದಾನದ ಹಣವನ್ನು ಸಹ ಬಿಡದೇ ನುಂಗಿ ನೀರು ಕುಡಿದಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಮಳೆ ಬೆಳೆ ಸಮೃದ್ಧವಾಗಿ ಬರಲಿದೆ. ದಲಿತರು, ಮಹಿಳೆಯರೂ ಸೇರಿದಂತೆ ಎಲ್ಲರಿಗೂ ಸುಭೀಕ್ಷೆ ಆಗುತ್ತದೆ. ಆದಷ್ಡು ಬೇಗ ಈ ಸರ್ಕಾರವನ್ನು ಕಿತ್ತೊಗೆದು ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಕರೆ ನೀಡಿದರು.



