ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಹಣಕಾಸು ವರ್ಷದಲ್ಲಿ ಇಸ್ರೋ ಇನ್ನೂ ಆರು ಉಡಾವಣೆಗಳನ್ನು ಮಾಡುವ ಗುರಿ ಹೊಂದಿದೆ ಎಂದು ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಹೇಳಿದ್ದಾರೆ.
ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಹೊತ್ತ GSLV-F17 ರಾಕೆಟ್ ಶುಕ್ರವಾರ ನಸುಕಿನ ಜಾವ 2:55ರ ಸುಮಾರಿಗೆ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಭಾರತದ ಹೊಸ ಮೈಲಿಗಲ್ಲು ಇದಾಗಿದೆ.
ಈ ಹಣಕಾಸು ವರ್ಷದಲ್ಲಿ ಪ್ರಧಾನಿ ಮೋದಿ ಅವರ ನಿರ್ದೇಶನದಲ್ಲಿ ನಾವು ಇನ್ನೂ ಆರು ಉಡಾವಣೆಗಳ ಗುರಿ ಹೊಂದಿದ್ದೇವೆ. ಈಗ ಉಡಾವಣೆಯಾಗಿರುವ EOS ಉಪಗ್ರಹ ಯಶಸ್ವಿ ಮಿಷನ್ ದೇಶಕ್ಕೆ ಅತ್ಯಂತ ಮಹತ್ವದ್ದು. ಈ ಉಪಗ್ರಹದಿಂದ ಭೂಮಿಯ ವೀಕ್ಷಣೆಯನ್ನು ಮಾಡಬಹುದು, ಅದರ ಮೇಲೆ ನಿರಂತರ ಮೇಲ್ವಿಚಾರಣೆಯನ್ನು ಇರಿಸಲಾಗುತ್ತದೆ. ಕೃಷಿ ಭೂಮಿಯ ಬೆಳೆಗಳ ಆರೋಗ್ಯ, ಮಣ್ಣಿನ ತೇವಾಂಶ, ಬೆಳೆಗಳಿಗೆ ರೋಗ ಬಾಧಿಸಿದೆಯೇ ಎಂಬುದನ್ನು ಪತ್ತೆಹಚ್ಚಲು, ಅರಣ್ಯ ಸಂರಕ್ಷಣೆ, ಹವಾಮಾನ ಮುನ್ಸೂಚನೆ, ಪರಿಸರ ಬದಲಾವಣೆ, ನೈಸರ್ಗಿಕ ವಿಕೋಪಗಳು, ಗಡಿ ರಕ್ಷಣೆಯ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ಗಗನಯಾನ್ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಸುರಕ್ಷಣಾ ವ್ಯವಸ್ಥೆಯ ಅಭಿವೃದ್ಧಿ ನಡೆಯುತ್ತಿದೆ. ಕುಲಶೇಖರಪಟ್ಟಣಂನಲ್ಲಿ ಮುಂದಿನ ಉಡಾವಣೆಯ ಸಕಲ ತಯಾರಿ ನಡೆಯುತ್ತಿದೆ. ಮಾರ್ಚ್ನಲ್ಲಿ ಉಡಾವಣೆ ಮಾಡುವ ಸಾಧ್ಯತೆಗಳಿವೆ ಎಂದಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಹೊತ್ತ GSLV-F17 ರಾಕೆಟ್ ಶುಕ್ರವಾರ ನಸುಕಿನ ಜಾವ 2:55ರ ಸುಮಾರಿಗೆ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಇದು ಇಸ್ರೋದ ಅತ್ಯುತ್ತಮ ಸಾಧನೆ ಮತ್ತು ನಮ್ಮ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.



