ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನೂರು ತಾಲೂಕಿನ ಆರ್.ಎಸ್. ದೊಡ್ಡಿ ಸಮೀಪ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತವೊಂದು ಮೂರು ಜೀವಗಳನ್ನು ಬಲಿಪಡೆದಿದೆ. ವೇಗವಾಗಿ ಬಂದ ಅಪರಿಚಿತ ಕಾರೊಂದು ಬೈಕ್ಗೆ ಗುದ್ದಿ, ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಈ ಅಪಘಾತದಲ್ಲಿ ಹನೂರು ತಾಲೂಕಿನ ಕೊಪ್ಪ ಗ್ರಾಮದ ನಿವಾಸಿಗಳಾದ ರಮೇಶ್, ಸುರೇಶ್ ಮತ್ತು ಮುನಿಯಪ್ಪ ಎಂಬ ಮೂವರು ಯುವಕರು ಸಾವನ್ನಪ್ಪಿದ್ದಾರೆ.
ಕೊಪ್ಪ ಗ್ರಾಮದ ಈ ಮೂವರು ಯುವಕರು ತಡರಾತ್ರಿ ಬೈಕ್ನಲ್ಲಿ ಆರ್.ಎಸ್. ದೊಡ್ಡಿ ಮಾರ್ಗವಾಗಿ ಕೊಳ್ಳೇಗಾಲದ ಕಡೆಗೆ ಪ್ರಯಾಣಿಸುತ್ತಿದ್ದರು. ಹುಲಸುಗುಡ್ಡೆ ಸಮೀಪ ತಲುಪುತ್ತಿದ್ದಂತೆ, ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಇವರ ಬೈಕ್ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಇಬ್ಬರು ಯುವಕರು ತೀವ್ರ ರಕ್ತಸ್ರಾವದಿಂದಾಗಿ ರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಮತ್ತೊಬ್ಬ ಯುವಕ ಸಾವು-ಬದುಕಿನ ನಡುವೆ ಹೋರಾಡುತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ತಕ್ಷಣ ಹನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ನಡೆದ ಜಾಗದಲ್ಲಿ ಬಿದ್ದಿರುವ ಕಾರಿನ ಒಡೆದ ಬಿಡಿಭಾಗಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಆ ಮಾರ್ಗದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ಚಾಲಕ ಮತ್ತು ಕಾರನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:
ಸದ್ಯಮೃತದೇಹಗಳನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಹನೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.



