ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ಧಿ-ಬುದ್ಧಿ ಪ್ರದಾಯಕ, ವಿಘ್ನನಿವಾರಕ ಶ್ರೀ ಗಣೇಶ ಚತುರ್ಥಿ ಹಬ್ಬದ ಸಡಗರ ದೇಶಾದ್ಯಂತ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಸಮಸ್ತ ನಾಗರಿಕರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
‘X’ ನಲ್ಲಿ ಪಿಎಂ ಮೋದಿಪೋಸ್ಟ್
ಸಾಮಾಜಿಕ ಜಾಲತಾಣ ‘X’ ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ನನ್ನ ದೇಶದ ಎಲ್ಲಾ ನಾಗರಿಕರಿಗೂ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು. ವಿಘ್ನನಿವಾರಕನಾದ ಆ ಗಣೇಶನ ದರ್ಶನ ಹಾಗೂ ಆರಾಧನೆಯು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಚೈತನ್ಯ, ನವೀನ ಉತ್ಸಾಹ ಹಾಗೂ ಸಮೃದ್ಧಿಯನ್ನು ತುಂಬಲಿ” ಎಂದು ಆಶಿಸಿದ್ದಾರೆ. ಮುಂದುವರಿದು, “ಆ ಲಂಬೋದರನ ದಿವ್ಯ ಆಶೀರ್ವಾದದ ಬಲದಿಂದ ಎಲ್ಲರ ಸತ್ಪ್ರಯತ್ನಗಳೂ ಯಶಸ್ಸನ್ನು ಕಾಣಲಿ ಮತ್ತು ನಮ್ಮ ಇಡೀ ಭಾರತ ದೇಶವು ನಿರಂತರವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎನ್ನುವುದೇ ನನ್ನ ಪ್ರಾರ್ಥನೆ. ಗಣಪತಿ ಬಪ್ಪ ಮೋರಯಾ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ತಮ್ಮ ಸಂದೇಶದೊಂದಿಗೆ ಪ್ರಧಾನಮಂತ್ರಿಯವರು ಗಣೇಶನ ದಿವ್ಯ ಸ್ವರೂಪವನ್ನು ಕೊಂಡಾಡುವ ವಿಶೇಷ ಸಂಸ್ಕೃತ ಸ್ತುತಿಯೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಹಿಂದೂ ಧರ್ಮದಲ್ಲಿ ಜ್ಞಾನ, ಸಮೃದ್ಧಿ ಮತ್ತು ಹೊಸ ಆರಂಭದ ದೇವರೆಂದು ಪೂಜಿಸಲ್ಪಡುವ ಗಣೇಶನ ಜನ್ಮದಿನವನ್ನು ಭಾರತದಾದ್ಯಂತ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮನೆ-ಮನೆಗಳಲ್ಲಿ ಹಾಗೂ ಸಾರ್ವಜನಿಕ ಪೆಂಡಾಲ್ಗಳಲ್ಲಿ ಸುಂದರವಾದ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.



