ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವ ಆದೇಶವನ್ನು ಬದಲಾಯಿಸಿ 3 ಸಾವಿರ ಕ್ಯೂಸೆಕ್ಗೆ ಇಳಿಸುವಂತೆ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮನವಿ ಮಾಡಿದೆ.
ಸೆಪ್ಟೆಂಬರ್ 15ರ ವೇಳೆಗೆ ರಾಜ್ಯದ ನಾಲ್ಕು ಪ್ರಮುಖ ಕಾವೇರಿ ಜಲಾಶಯಗಳಲ್ಲಿ 55.389 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಜೂನ್ 1ರಿಂದ ಸೆಪ್ಟೆಂಬರ್ 15ರವರೆಗೆ ಸುಮಾರು 111 ಟಿಎಂಸಿ ನೀರು ಒಳಹರಿವು ಬಂದಿದ್ದು, 30 ವರ್ಷಗಳ ಸರಾಸರಿ 228.108 ಟಿಎಂಸಿಗೆ ಹೋಲಿಸಿದರೆ ಶೇ.51ಕ್ಕೂ ಅಧಿಕ ಕೊರತೆ ಇದೆ.
ಇದನ್ನೂ ಓದಿ:
ಅಷ್ಟೇ ಅಲ್ಲದೆ, ಆಗಸ್ಟ್ 27ರಂದು 26,930 ಕ್ಯೂಸೆಕ್ ಇದ್ದ ಒಳಹರಿವು ಸೆಪ್ಟೆಂಬರ್ 8ಕ್ಕೆ 3,887 ಕ್ಯೂಸೆಕ್ಗೆ ಕುಸಿತ ಕಂಡುಬಂದಿದೆ. ಕೇವಲ 15 ದಿನಗಳಲ್ಲಿ ಶೇ.85.57ರಷ್ಟು ಇಳಿಕೆ ಕಂಡುಬಂದಿದ್ದು, ಸೆಪ್ಟೆಂಬರ್ 15ರ ವೇಳೆಗೆ ಒಳಹರಿವು ಸುಮಾರು 3 ಸಾವಿರ ಕ್ಯೂಸೆಕ್ಗೆ ತಲುಪಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಒಳಹರಿವು ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ರಾಜ್ಯದ ಜಲಸಂಗ್ರಹವನ್ನು ಕಾಪಾಡಿಕೊಳ್ಳುವುದು ಕರ್ನಾಟಕಕ್ಕೆ ಸವಾಲಾಗಿದೆ. 6 ಸಾವಿರ ಕ್ಯೂಸೆಕ್ ನೀರು ಬಿಡುವುದು ಕಷ್ಟ. ಹೀಗಾಗಿ 3 ಸಾವಿರ ಕ್ಯೂಸೆಕ್ಗೆ ಪ್ರಮಾಣ ಇಳಿಸುವಂತೆ ಕರ್ನಾಟಕ CWMAಗೆ ಈಗ ಮನವಿ ಮಾಡಿದೆ.



