September 17, 2026
Thursday, September 17, 2026
spot_img

ರಾಜ್ಯದಲ್ಲಿ 102 ತಾಲೂಕು ಮಾತ್ರ ಬರಪೀಡಿತವೇ? ರೈತರ ಸಮಸ್ಯೆ ಆಲಿಸಲು ರಾಜ್ಯ ಪ್ರವಾಸ ಮಾಡ್ತೇನೆ : ನಿಖಿಲ್ ಕುಮಾರಸ್ವಾಮಿ

ಹೊಸದಿಗಂತ ವರದಿ ರಾಮನಗರ:

ರಾಮನಗರದ ನೂತನ ಜೆಡಿಎಸ್ ಕಚೇರಿಗೆ ಇಂದು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ನೀಡಿದರು. ಕಳೆದ 15 ದಿನಗಳ ಹಿಂದೆ ನೂತನವಾಗಿ ಆರಂಭವಾಗಿರುವ ಈ ಕಚೇರಿಯಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪಕ್ಷ ಸಂಘಟನೆಯನ್ನು ಬಲಪಡಿಸುವ ಕುರಿತು ವಿಸ್ತೃತ ಸಮಾಲೋಚನೆ ನಡೆಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿದೆ. ಪಕ್ಷದ ಸಂಘಟನೆಗಾಗಿ ದುಡಿದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು. ಈ ಕಚೇರಿಯ ಮೂಲಕ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ರಾಮನಗರದಿಂದ ಸ್ಪರ್ಧೆ ಖಚಿತ ಎಂದ ನಿಖಿಲ್

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪು ಕಾರ್ಯಕರ್ತರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದನ್ನು ಉತ್ತಮ ಫಲಿತಾಂಶದ ಮೂಲಕ ಹೋಗಲಾಡಿಸಿ ಕಾರ್ಯಕರ್ತರಲ್ಲಿ ನೂತನ ಉತ್ಸಾಹ ತುಂಬಬೇಕಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನು ನೋಡುವ ಗುರಿ ನಮ್ಮದಾಗಿದೆ” ಎಂದರು.

ಕೆಲವು ಕಡೆ ಜೆಡಿಎಸ್‌ಗೆ ಹಿನ್ನಡೆಯಾಗಿದೆ ನಿಜ, ಆದರೆ ರಾಜಕೀಯದಲ್ಲಿ ಹಿನ್ನಡೆ-ಮುನ್ನಡೆ ಶಾಶ್ವತವಲ್ಲ, ಅದು ತಾತ್ಕಾಲಿಕ. ಬದಲಾವಣೆಯೊಂದಿಗೆ ನಾವು ಮತ್ತೆ ಸಂಘಟಿತ ಪ್ರಯತ್ನ ಮಾಡುತ್ತೇವೆ. ಸದ್ಯ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮುಖ್ಯ, ಅವರಿಗೆ ಶಕ್ತಿ ತುಂಬಿದಾಗ ಮಾತ್ರ ಅವರು ಎಂಎಲ್‌ಎ, ಎಂಪಿ ಚುನಾವಣೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ” ಎಂದು ಅಭಿಪ್ರಾಯಪಟ್ಟರು.

ಶೀಘ್ರದಲ್ಲೇ ರಾಜ್ಯ ಪ್ರವಾಸ: ರೈತರ ಸಮಸ್ಯೆ ಆಲಿಕೆ

ಮತ್ತೆ ರಾಜ್ಯ ಪ್ರವಾಸ ಕೈಗೊಳ್ಳುವ ಕುರಿತು ಮಾತನಾಡಿದ ಅವರು, ಶೀಘ್ರದಲ್ಲೇ ರಾಜ್ಯ ಪ್ರವಾಸದ ಬಗ್ಗೆ ತೀರ್ಮಾನ ಮಾಡುತ್ತೇನೆ. ಸರ್ಕಾರ ಬಂದು ಮೂರು ವರ್ಷವಾದರೂ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರ ಕೇವಲ 102 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ, ಉಳಿದ ತಾಲೂಕುಗಳಲ್ಲಿ ಬರ ಇಲ್ಲವೇ? ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಲಿದ್ದೇನೆ ಎಂದು ಹೇಳಿದರು.

ಕುಮಾರಣ್ಣ ವಿರುದ್ಧ ಸಚಿವ ಬಾಲಕೃಷ್ಣ ಅವರ ಟೀಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅವರ ಹೇಳಿಕೆಗಳಿಗೆ ಉತ್ತರ ಕೊಡುವುದಿಲ್ಲ. ಕುಮಾರಣ್ಣನವರನ್ನು ನಿಂದಿಸಿದರೆ ಕೆಲವರಿಗೆ ಸ್ಥಾನ-ಮಾನ ಸಿಗುತ್ತದೆ. ಇದು ಜೆನ್-ಝಿ ಯುಗ, ಜನರು ಎಲ್ಲವನ್ನೂ ಗಮನಿಸುತ್ತಾರೆ. ಅಧಿಕಾರದಲ್ಲಿರುವವರು ಮೈಕ್ ಮೂಲಕವಲ್ಲ, ಕೆಲಸದ ಮೂಲಕ ಉತ್ತರ ಕೊಡಬೇಕು ಎಂದರು.

ಗಣೇಶ ಹಬ್ಬದ ಡಿಜೆ ವಿವಾದ:

ಟಿ.ನರಸೀಪುರ ಹಾಗೂ ಮದ್ದೂರು ಪ್ರಕರಣಗಳ ಕುರಿತು ಮಾತನಾಡಿ, ಸರ್ಕಾರ ಒಂದು ಸಮುದಾಯವನ್ನು ಓಲೈಕೆ ಮಾಡಬಾರದು. ಹಿಂದೂ ಸಂಸ್ಕೃತಿ ಮತ್ತು ಆಚರಣೆಗೆ ಅಡ್ಡಿಪಡಿಸುವುದು ಸರಿಯಲ್ಲ. ಧಾರ್ಮಿಕ ನಂಬಿಕೆಗೆ ಧಕ್ಕೆ ಆಗದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ಸಬ್ಬಕೆರೆ ಶಿವಲಿಂಗಪ್ಪ ಅವರು ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !