September 19, 2026
Saturday, September 19, 2026
spot_img

ಸಚಿವ ರುದ್ರಪ್ಪ ಲಮಾಣಿಗೆ ಮೂರು ಕೋಟಿ ರೂಪಾಯಿ ದಂಡ: ಆರು ತಿಂಗಳೊಳಗೆ ಪಾವತಿಸಲೇಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟೆ ಬಳಿಯ ಕ್ವಾರಿಯಲ್ಲಿ ಲೈಸೆನ್ಸ್‌ ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಗಣಿಕಾರಿಗೆ ನಡೆಸಿದ್ದ ಆರೋಪದ ಹಿನ್ನೆಲೆ ರಾಜ್ಯದ ಸಕ್ಕರೆ ಸಚಿವ, ಹಾವೇರಿ ಜಿಲ್ಲಾ ಉಸ್ತುವಾರಿ ಆಗಿರುವ ರುದ್ರಪ್ಪ ಲಮಾಣಿ ಅವರಿಗೆ ಮೂರು ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನು ಮೂರು ಕಂತಿನಂತೆ ಆರು ತಿಂಗಳಿನಲ್ಲಿ ಕಟ್ಟಬೇಕು ಎಂದು ಸೂಚನೆ ನೀಡಲಾಗಿದೆ.

ಹಲವು ವರ್ಷದ ಹಿಂದೆ ಹುಣಸಿಕಟ್ಟೆ ಬಳಿ ಕಲ್ಲು ಕ್ವಾರಿ ನಡೆಸಲು ರುದ್ರಪ್ಪ ಲಮಾಣಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಲೈಸೆನ್ಸ್‌ ಪಡೆದಿದ್ದಾರೆ. ಕ್ವಾರಿ ನಡೆಸುತ್ತಿದ್ದಾರೆ. ತಮ್ಮದೇ ಕ್ವಾರಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಕಣ್ಣಿಗೆ ಬಿದ್ದಿತ್ತು. ಇದಕ್ಕೆ ಬೇಕಾದ ದಾಖಲೆಗಳೂ ಸಿಕ್ಕಿದ್ದವು. ಹೀಗಾಗಿ ಅವರಿಗೆ ನೊಟೀಸ್‌ ನೀಡಲಾಗಿದೆ.

ಆರು ತಿಂಗಳ ಒಳಗಾಗಿ, ಸುಮಾರು ₹ 3 ಕೋಟಿ ದಂಡವನ್ನು ಪಾವತಿಸಬೇಕು ಎಂದು ಸೂಚಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಕಲ್ಲು ಕ್ವಾರಿ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಈ ಪಟ್ಟಿಯಲ್ಲಿ ಸಚಿವ ರುದ್ರಪ್ಪ ಲಮಾಣಿ ಅವರ ಕಲ್ಲು ಕ್ವಾರಿಯೂ ಸೇರಿದೆ. ಇಂತಿಷ್ಟು ಪ್ರಮಾಣದ ಕಲ್ಲುಗಳನ್ನು ಹೊರಗೆ ತೆಗೆಯಲು ಅನುಮತಿ ಇರುತ್ತದೆ. ಆದರೆ ಲಮಾಣಿ ಅವರ ಕ್ವಾರಿಯಲ್ಲಿ ಹೆಚ್ಚಿನ ಪ್ರಮಾಣದ ಕಲ್ಲನ್ನು ಹೊರತೆಗೆದು ಸಾಗಿಸಿರುವುದು ಗೊತ್ತಾಗಿದೆ. ಮೂರು ಕಂತುಗಳಲ್ಲಿ ದಂಡ ಕಟ್ಟಲು ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !