ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ದೊಡ್ಡ ಆಪತ್ತು ಎದುರಾಗಲಿದೆ. ಜನರು ಪಶ್ಚಾತ್ತಾಪ ಪಡುವುದರಲ್ಲಿ ಅರ್ಥವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಉತ್ತರ ಕೇರಳ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್ಎಸ್ಎಸ್ ದೇಶದಲ್ಲಿನ ವೈವಿಧ್ಯತೆಯನ್ನು ನಾಶಪಡಿಸಲು ಮತ್ತು ಧರ್ಮದ ಆಧಾರದ ಮೇಲೆ ರಾಷ್ಟ್ರವನ್ನು ರಚಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
ಗೋವು, ಆಹಾರ ಮತ್ತು ಒಂದು ಕೋಮಿನ ನಾಗರಿಕರನ್ನು ದೇಶದ ಶತ್ರುಗಳೆಂದು ಬಿಂಬಿಸುವ ಮೂಲಕ, ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಧರ್ಮ, ಜಾತಿ ಅಥವಾ ಪಂಥದ ಹೊರತಾಗಿ ಪ್ರತಿಯೊಬ್ಬರೂ ಕಾನೂನಿನ ಮುಂದೆ ಸಮಾನ ರಕ್ಷಣೆಗೆ ಅರ್ಹರಾಗಿದ್ದಾರೆ. ಆದರೆ, ಬಿಜೆಪಿ, ಸಂಘಪರಿವಾರ ಅದನ್ನು ಬದಲಾಯಿಸಲು ಹೊರಟಿದೆ ಎಂದು ಕೇರಳ ಸಿಎಂ ಆಪಾದಿಸಿದರು.
ಇಂದು ಬಿಜೆಪಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಿದೆ. ಒಂದು ವೇಳೆ ಬಿಜೆಪಿ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ದೇಶವು ದುಸ್ತರವಾದ ಅಪಾಯವನ್ನು ಎದುರಿಸಲಿದೆ. ನಂತರ ಜನರು ವಿಷಾದ ವ್ಯಕ್ತಪಡಿಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ ಎಂದು ಅವರು ಹೇಳಿದರು.
ಬಿಜೆಪಿಯನ್ನು ಸೋಲಿಸುವ ಮತ್ತು ಅದು ಮುಂದೆ ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವ ಉದ್ದೇಶದಿಂದ ಜಾತ್ಯತೀತ ಮನೋಭಾವದ ಎಲ್ಲ ಪಕ್ಷಗಳು ಒಂದಾಗಿವೆ. ಜನರ ಏಕೀಕೃತ ಕೂಟವನ್ನು ರಚಿಸಲಾಗಿದೆ. ಮೂರನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರಲಾರೆವು ಎಂಬುದು ಬಿಜೆಪಿಗೂ ಗೊತ್ತಿದೆ ಎಂದರು.