ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಗ್ರರ ಅಟ್ಟಹಾಸಕ್ಕೆ ಬೆದರಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೌಧರಿಗುಂಡ್ ಗ್ರಾಮದಿಂದ ಹತ್ತು ಕಾಶ್ಮೀರಿ ಪಂಡಿತರ ಕುಟುಂಬಗಳು ತಮ್ಮ ಹುಟ್ಟೂರು ತೊರೆದಿವೆ. ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಇತ್ತೀಚೆಗೆ ಉಗ್ರರು ನಡೆಸುತ್ತಿರುವ ದಾಳಿಯಿಂದ ಆತಂಕಗೊಂಡು ಈ ಕುಟುಂಬಗಳು ಹುಟ್ಟೂರು ತೊರೆದಿವೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ನಿತ್ಯ ಇಲ್ಲಿ ಜೀವಭಯದಲ್ಲೇ ದಿನ ಕಳೆಯಬೇಕಾದ ಸ್ಥಿತಿ ಇದೆ. ಬದುಕಿ ಉಳಿಯುವ ಧೈರ್ಯ ಯಾರಿಗೂ ಇಲ್ಲದಾಗಿದೆ ಎಂದು ಗ್ರಾಮಸ್ಥರೊಬ್ಬರು ನೋವು ತೋಡೊಕೊಳಡಿದ್ದಾರೆ.
ಚೌಧರಿಗುಂಡ್ ಗ್ರಾಮದಲ್ಲಿ ಕಾಶ್ಮೀರಿ ಪಂಡಿತ್ ಪುರಾನ್ ಕೃಷ್ಣನ್ ಭಟ್ ಹಾಗೂ ಕಾಶ್ಮೀರಿ ಪಂಡಿತರಾದ ಮೋನಿಶ್ ಕುಮಾರ್ ಮತ್ತು ರಾಮ್ ಸಾಗರ್ ಅವರನ್ನು ಅಕ್ಟೋಬರ್ ತಿಂಗಳಿನಲ್ಲಿ ಉಗ್ರರು ಹತ್ಯೆ ಮಾಡಿದ್ದರು. ಉಗ್ರರು ನಿರಂತರವಾಗಿ ಕಾಶ್ಮೀರಿ ಪಂಡಿತರನ್ನು ಕೊಲೆ ಮಾಡುತ್ತಿರುವುದರಿಂದ ಇಲ್ಲಿನ ಕುಟುಂಬಗಳು ಜೀವಭಯದಲ್ಲಿದ್ದು, 35-40 ಸದಸ್ಯರಿರುವ 10 ಕಾಶ್ಮೀರಿ ಪಂಡಿತರ ಕುಟುಂಬಗಳು ಊರು ತೊರೆಯುವ ಮೂಲಕ ಪ್ರಸ್ತುತ ಈ ಗ್ರಾಮವೇ ಖಾಲಿಯಾಗಿದೆ ಎಂದು ಚೌಧರಿಗುಂಡ್ ನಿವಾಸಿಯೊಬ್ಬರು ತಿಳಿಸಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆಗಳಿ ವರದಿ ಮಾಡಿವೆ.