ಹೊಸದಿಗಂತ ವರದಿ ದಾಂಡೇಲಿ:
ಕಾಳಿ ನದಿಯಲ್ಲಿ ಈಜಲು ಇಳಿದಿದ್ದ ಯುವಕನೋರ್ವನನ್ನು ಮೊಸಳೆಗಳು ಎಳೆದೊಯ್ದ ಘಟನೆ ಬೆಳಿಗ್ಗೆ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ನಡೆದಿದೆ. ಇದರಿಂದಾಗಿ ದಾಂಡೇಲಿಯಲ್ಲಿ ಮೊಸಳೆಗೆ ಬಲಿಯಾಗುವವರ ಸಂಖ್ಯೆ ಮುಂದುವರೆದಂತಾಗಿದೆ.
ಗುಜರಾತ ಮೂಲದ ದಾಂಡೇಲಿಯಲ್ಲಿ ನೆಲೆಸಿರುವ ಪಿತಾಂಬರಿದಾಸ್ ಈ ದುರಂತಕ್ಕೆ ಸಿಲುಕಿದವ. ಈತ ಬೆಳಿಗ್ಗೆ ಬಟ್ಟೆ, ಚಪ್ಪಲಿ ದಂಡೆಯ ಮೇಲಿಟ್ಟು ನದಿಯಲ್ಲಿ ಈಜಲು ಇಳಿದಿದ್ದ. ಈ ವೇಳೆ ಎರಡು ಮೊಸಳೆಗಳು ದಾಳಿ ನಡೆಸಿ ಎಳೆದೊಯ್ದಿವೆ. ಇದನ್ನು ಕಂಡ ಸ್ಥಳೀಯರು ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಈಗ ಶವದ ಹುಡುಕಾಟ ನಡೆದಿದೆ.