ಹೊಸದಿಗಂತ ವರದಿ ಹಾಸನ :
ಬೆಂಕಿ ಆರಿಸಲು ಹೋದ ರೈತ ಬೆಂಕಿಗಾಹುತಿಯಾಗಿರುವ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಕುಂಚೇವು ಗ್ರಾಮದಲ್ಲಿ ನಡೆದಿದೆ.
ಕೃಷ್ಣೇಗೌಡ (62) ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ ರೈತ. ನಿನ್ನೆ ತಮ್ಮ ಜಮೀನಿನ ಬಳಿ ಕೃಷ್ಣೇಗೌಡ ತೆರಳಿದ್ದ ವೇಳೆ ಜಮೀನಿನ ಬದುವಿನಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ಸಂಪೂರ್ಣ ಜಮೀನಿಗೆ ವ್ಯಪಿಸುತ್ತಿದ್ದುದ್ದನ್ನು ಕಂಡು ಕೃಷ್ಣೇಗೌಡ ಬೆಂಕಿ ನಂದಿಸಲು ಹೋಗಿದ್ದಾರೆ.
ಜೋರಾಗಿ ಉರಿಯುತ್ತಿದ್ದ ಬೆಂಕಿಗೆ ಸಿಲುಕಿದ್ದ ಕೃಷ್ಣೇಗೌಡ ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಗಾಯಾಳುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದ ಗ್ರಾಮಸ್ಥರು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ ಕೃಷ್ಣೇಗೌಡ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣೇಗೌಡ ಸಾವನ್ನಪ್ಪಿದ್ದಾರೆ.
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದುಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.