ಹೊಸದಿಗಂತ ವರದಿ, ಬೀದರ್:
ಮುಂಬರುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಪಕ್ಷ ಏರ್ಪಡಿಸಿರುವ ‘ಪ್ರಜಾಧ್ವನಿ’ ಕಾರ್ಯಕ್ರಮಕ್ಕೂ ಮುನ್ನ ನಡೆದ ಪೂರ್ವಭಾವಿ ಸಭೆಯಲ್ಲಿ ಬಸವಕಲ್ಯಾಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಮಗ ವಿಜಯಸಿಂಗ್ ಬೆಂಬಲಿಗರು ಇನ್ನೋರ್ವ ಟಿಕೆಟ್ ಆಕಾಂಕ್ಷಿ ಆನಂದ ದೇವಪ್ಪಾ ಅವರ ಮೇಲೆ ಹಲ್ಲೆ ನಡೆಸಿದರು ಎಂದು ತಿಳಿದು ಬಂದಿದೆ.
ಗಾಯಗೊಂಡ ಆನಂದ್ ದೇವಪ್ಪಾ ಅವರನ್ನು ಬಸವಕಲ್ಯಾಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಟಿಕೆಟ್ ಆಕಾಂಕ್ಷಿಗಳ ನಡುವಿನ ಮಾರಾಮಾರಿಯ ಕಾರಣ ಇಂದು ಶುಕ್ರವಾರ ನಡೆದ ‘ಪ್ರಜಾಧ್ವನಿ’ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಖ್ಯೆ ಕಮ್ಮಿಯಾಗಿತ್ತು.
ಚುನಾವಣೆಗೂ ಮುನ್ನವೇ ತಾಲೂಕು ಕಾಂಗ್ರೆಸ್ ಒಡೆದು ಹೋಳಾಗಿದ್ದು ಆನಂದ ದೇವಪ್ಪಾ, ಧನರಾಜ್ ತಾಡಂಪಳ್ಳಿ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮಗ ವಿಜಯಸಿಂಗ್ ನಡುವೆ ಟಿಕೆಟ್ ಗಾಗಿ ಪೈಪೊಟಿ ಇದೆ. ಸ್ಥಳೀಯರಲ್ಲದವರಿಗೆ ಟಿಕೆಟ್ ಕೊಟ್ಟರೆ ಬೆಂಬಲಿಗರಲ್ಲಿ ಒಡಕು ಉಂಟಾಗಬಹುದು, ಅತ್ತ ಜನಸಂಪರ್ಕ ಹೊಂದಿರುವ ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ ಕಡೆಗಣಿಸಿದರೆ ಬಸವಕಲ್ಯಾಣ ಕ್ಷೇತ್ರದ ಜೊತೆಗೆ ಹುಮನಾಬಾದ್, ಭಾಲ್ಕಿ ಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀರ್ವ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ ಎಂದು ಆಂತರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.