ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಅವರ್ಸಾದ ಕ್ಷತ್ರಿಯ ಕೋಮಾರಪಂಥ ಸಮಾಜದ ಸುಗ್ಗಿ ತಂಡ ತಾಲೂಕಿನ ವಿವಿಧ ಭಾಗಗಳಲ್ಲಿ ಸುಗ್ಗಿ ಕುಣಿತ ಪ್ರದರ್ಶನ ಮತ್ತು ಪಟ್ಟಣದಲ್ಲಿ ರೋಡ್ ಶೋ ಮೂಲಕ ಜನ ಮನ ರಂಜಿಸಿತು.
ಅಲಗೇರಿ, ಕಂತ್ರಿ ಮೂಲಕ ಆಗಮಿಸಿದ ನೂರಕ್ಕೂ ಅಧಿಕ ಸುಗ್ಗಿ ತುರಾಯಿಗಳನ್ನೊಳಗೊಂಡ ಅತಿ ದೊಡ್ಡ ಸುಗ್ಗಿ ತಂಡ ಶಕ್ತಿ ದೇವತೆ ಶ್ರೀಶಾಂತಾದುರ್ಗಾ ದೇವಾಲಯದ ಎದುರು ಕುಣಿದು ಶ್ರೀದೇವರಿಗೆ ಗೌರವ ನಮನ ಸಲ್ಲಿಸಿದರು.
ದೇವಾಲಯದ ಆವರಣದಲ್ಲಿ ಸುಗ್ಗಿ ತಂಡಕ್ಕೆ ಕೋಮಾರಪಂಥ ಸಮಾಜದ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಕುಂಬಾರಕೇರಿಯ ಕದಂಬೇಶ್ವರ ದೇವಾಲಯದ ಬಳಿ ಆಗಮಿಸಿದ ಸುಗ್ಗಿ ತಂಡಕ್ಕೆ ಕುಂಬಾರಕೇರಿ ಲಕ್ಷ್ಮೇಶ್ವರ ಸುತ್ತ ಮುತ್ತಲಿನ ಕೋಮಾರಪಂಥ ಸಮಾಜದವರು ಮತ್ತು ಊರ ನಾಗರಿಕರು ಭವ್ಯ ಸ್ವಾಗತ ಕೋರಿದರು.
ದೇವಾಲಯದ ಎದುರು
ಗುಮಟೆ ಪಾಂಗ್ ವಾದನ, ಜಾನಪದ ಸುಗ್ಗಿ ಹಾಡುಗಳೊಂದಿಗೆ ಮನಮೋಹಕ ಕೋಲಾಟ ಮತ್ತು ಸುಗ್ಗಿ ಕುಣಿತ ಪ್ರದರ್ಶನ ನೀಡಿದ ಸುಗ್ಗಿ ತಂಡ ಆರತಿ ಬೆಳಗಿ ನೃತ್ಯ ಪ್ರದರ್ಶನ ನೀಡುವ ಮೂಲಕ ಊರಿನ ಜನರಿಗೆ ಶುಭ ಹಾರೈಸಿದರು.
ಕುಂಬಾರಕೇರಿ ಲಕ್ಷ್ಮೇಶ್ವರ ಭಾಗದ ಹಕ್ಕುದಾರ ಮನೆತನದ ರಾಜು ಎಂ.ನಾಯ್ಕ, ಪುರಸಭೆ ಸದಸ್ಯ ಕಾರ್ತಿಕ ನಾಯ್ಕ, ಪ್ರಮುಖರುಗಳಾದ ದುರ್ಗಾನಂದ ನಾಯ್ಕ, ಮೋಹನ ನಾಯ್ಕ, ಉಮೇಶ ನಾಯ್ಕ,ಧನಂಜಯ ನಾಯ್ಕ, ರಾಮಾ ನಾಯ್ಕ, ಶೈಲೇಶ ನಾಯ್ಕ, ತಾ.ಪಂ ಮಾಜಿ ಸದಸ್ಯೆ ಮಂಗಲಾ ಬೆಳ್ಳು ನಾಯ್ಕ, ಈಶ್ವರ ನಾಯ್ಕ, ಶ್ರೀನಿವಾಸ ನಾಯ್ಕ,
ಅರ್ಚಕ ಅವಿನಾಶ ಜೋಶಿ ಸೇರಿದಂತೆ ಊರ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.