ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಸ್ಐಆರ್ (SIR) ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಶಾಸಕರ ಸಮ್ಮುಖದಲ್ಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿರುವ ಹೃದಯವಿದ್ರಾವಕ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೆವಾಡಿ ಗ್ರಾಮದಲ್ಲಿ ಸಂಭವಿಸಿದೆ.
ಬಾಗೆವಾಡಿ ಗ್ರಾಮದ ರತ್ನಮ್ಮ ಬಳಿಗಾರ (43) ಮೃತಪಟ್ಟ ದುರ್ದೈವಿ. ಬಾಗೆವಾಡಿ ಗ್ರಾಮದಲ್ಲಿ ಸರ್ಕಾರದ ವಿಶೇಷ ಎಸ್ಐಆರ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರತ್ನಮ್ಮ ಬಿಎಲ್ಒ ಆಗಿ ನಿಯೋಜನೆಗೊಂಡಿದ್ದರು. ಶುಕ್ರವಾರ ಸಂಜೆ ವೇಳೆ ಶಿರಹಟ್ಟಿ ಕ್ಷೇತ್ರದ ಶಾಸಕರಾದ ಡಾ. ಚಂದ್ರು ಲಮಾಣಿ ಗ್ರಾಮಕ್ಕೆ ಭೇಟಿ ನೀಡಿ, ಎಸ್ಐಆರ್ ಪ್ರಗತಿ ಪರಿಶೀಲನೆ ನಡೆಸಿದ್ದರು.
ಚಹಾ ಕುಡಿಯುವಾಗ ಸಂಭವಿಸಿದ ದುರಂತ
ನಂತರ ಗ್ರಾಮದ ಮಹೇಶಗೌಡ ಪಾಟೀಲ ಎಂಬುವವರ ಮನೆಯಲ್ಲಿ ಶಾಸಕರು ಹಾಗೂ ಅಲ್ಲಿ ನೆರೆದಿದ್ದ ಸಿಬ್ಬಂದಿಗೆ ಚಹಾದ ವ್ಯವಸ್ಥೆ ಮಾಡಲಾಗಿತ್ತು. ಶಾಸಕರ ಸಭೆ ಮುಗಿಸಿ ಎಲ್ಲರೊಂದಿಗೆ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ರತ್ನಮ್ಮ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಕುಸಿದು ಬಿದ್ದಿದ್ದಾರೆ.
ಇದನ್ನೂ ಓದಿ;
ಮಾರ್ಗಮಧ್ಯೆ ಕೊನೆಯುಸಿರು
ರತ್ನಮ್ಮ ಅವರು ಕುಸಿದು ಬೀಳುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿ ಹಾಗೂ ಶಾಸಕರು ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ರತ್ನಮ್ಮ ಅವರು ಸಾವನ್ನಪ್ಪಿದ್ದಾರೆ. ತೀವ್ರ ಹೃದಯಾಘಾತದಿಂದಲೇ ಅವರು ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿಗಳು ತಿಳಿಸಿವೆ.



