ದಿಗಂತ ವರದಿ ಮಡಿಕೇರಿ:
ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಹೋಟೆಲ್ ಕ್ಯಾಷಿಯರ್’ಗೆ ಬೀರ್ ಬಾಟಲಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಕುಶಾಲನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕುಶಾಲನಗರದ ಹೃದಯ ಭಾಗದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್’ನಲ್ಲಿ ಈ ಕೃತ್ಯ ನಡೆದಿದ್ದು, ಬಾರ್’ನ ಕ್ಯಾಷಿಯರ್ ಸಂತೋಷ್ ಹತರಾದವರಾಗಿದ್ದು, ಕುಶಾಲನಗರ ಜನತಾ ಕಾಲೋನಿಯ ಹರ್ಷ ಎಂಬಾತನೇ ಕುಡಿದ ಮತ್ತಿನಲ್ಲಿ ಇರಿದವನಾಗಿದ್ದಾನೆ.
ಭಾನುವಾರ ರಾತ್ರಿ ಕಂಠಮಟ್ಟ ನಶೆ ಏರಿಸಿದ್ದ ಹರ್ಷ ಕುಡಿತದ ಅಮಲಿನಲ್ಲಿ ಕ್ಯಾಷಿಯರ್ ಸಂತೋಷ್ ಜೊತೆ ಜಗಳ ತೆಗೆದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭ ಹರ್ಷ ಬಿಯರ್ ಬಾಟಲಿಯಿಂದ ಸಂತೋಷ್’ನ ತಲೆ ಮತ್ತು ಕುತ್ತಿಗೆಗೆ ಬಲವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಗಾಯಾಳು ಅಸುನೀಗಿದ್ದಾರೆ.
ಆರೋಪಿ ಹರ್ಷನನ್ನು ಬಂಧಿಸಿರುವ ಕುಶಾಲನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.