ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಬಲಂಗೀರ್ ಜಿಲ್ಲೆಯ ಶಾಲೆಯೊಂದರ ವಾರ್ಷಿಕ ಕ್ರೀಡಾಕೂಟದ ವೇಳೆ ಅನಾಹುತವೊಂದು ಸಂಭವಿಸಿದೆ. ಪಂದ್ಯಾಟದ ವೇಳೆ ವೀಕ್ಷಿಸುತ್ತಿದ್ದ ಬಾಲಕನ ಕುತ್ತಿಗೆಗೆ ಕ್ರೀಡಾಪಟುವೊಬ್ಬ ಎಸೆದ ಜಾವೆಲಿನ್ ಭರ್ಜಿ ಜೋರಾಗಿ ಚುಚ್ಚಿದೆ. ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸದಾನಂದ ಮೆಹರ್ ಎಂಬ ವಿದ್ಯಾರ್ಥಿಗೆ ಜಾವೆಲಿನ್ ಚುಚ್ಚಿದೆ. ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಬಾಲಕ ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗಳಪುರ ಬಾಲಕರ ಪಂಚಾಯತ್ ಪ್ರೌಢಶಾಲೆಯಲ್ಲಿ ಅಭ್ಯಾಸದ ವೇಳೆ ಈ ಘಟನೆ ನಡೆದಿದೆ. ಮತ್ತೊಬ್ಬ ವಿದ್ಯಾರ್ಥಿ ಎಸೆದ ಜಾವೆಲಿನ್ ಮೆಹರ್ ಕುತ್ತಿಗೆಗೆ ತಗುಲಿದೆ.
ವಿದ್ಯಾರ್ಥಿಯ ಕುತ್ತಿಗೆಯಲ್ಲಿ ಜಾವೆಲಿನ್ ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಬಲಂಗೀರ್ನ ಭೀಮಾ ಭೋಯ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಅದನ್ನು ವೈದ್ಯರು ಅವರ ಕುತ್ತಿಗೆಯಿಂದ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಇದೀಗ ಮೆಹರ್ ಅವರನ್ನು ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.ಬಾಲಕನಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಿಕಿತ್ಸೆಗೆ ಬೇಕಾದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ಹೇಳಿದ್ದಾರೆ.