ಹೊಸದಿಗಂತ ವರದಿ ಕನಕಪುರ:
ಮನುಷ್ಯ ಯಾವ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಪ್ರಪಂಚದ ಎಲ್ಲಾ ಧರ್ಮಗಳು ಹೇಳುವ ತತ್ವವೊಂದೇ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಹಾರೋಬೆಲೆ ಗ್ರಾಮದ ಸರ್ಕಲ್ ಮೇರಿ ಮಾತೆ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು “ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಈ ದೇಶದ ಆರೋಗ್ಯ ಚೆನ್ನಾಗಿರಲಿ ಎಂದು ದೇಶದ ಮೊದಲ ಆರೋಗ್ಯ ಸಚಿವರು ಸ್ಥಾಪಿಸಿದ ಸರ್ಕಲ್ ಮೇರಿ ಮಾತೆ ಎಲ್ಲರಿಗೂ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು. ನಾನು ಹಾರೋಬೆಲೆ ಗ್ರಾಮಕ್ಕೆ ಉಪಮುಖ್ಯಮಂತ್ರಿ, ಶಾಸಕನಾಗಿ ಇಲ್ಲಿಗೆ ಬಂದಿಲ್ಲ. ಸ್ಥಳೀಯ ಸಂಸ್ಥೆಯಿಂದ ಆಯ್ಕೆಮಾಡಿ ಉಪಮುಖ್ಯಮಂತ್ರಿ ಸ್ಥಾನದ ತನಕ ಬೆಳೆಸಿದ್ದೀರಿ. 40 ವರ್ಷ ರಾಜಕೀಯದಲ್ಲಿ ಇರಲು ನಿಮ್ಮೆಲ್ಲರ ಆಶೀರ್ವಾದವೇ ಕಾರಣ ಎಂದರು.
ದೇವರು ವರ, ಶಾಪ ಎರಡೂ ನೀಡುವುದಿಲ್ಲ, ಬದಲಾಗಿ ಅವಕಾಶ ನೀಡುತ್ತಾನೆ. ಈ ಊರಿನ ಅಭಿವೃದ್ಧಿಗೆ ಸರ್ಕಾರ ಎಲ್ಲಾ ಸಹಕಾರ ನೀಡುತ್ತದೆ ಎಂದು ಹೇಳಿದರು.
ಮಿತ್ರನನ್ನು ನೆನೆದ ಡಿಸಿಎಂ
ನಮ್ಮ ಗೆಳೆಯ ಆಗಣ್ಣ ಇದ್ದಿದ್ದರೆ ನನ್ನ ಹಾಗೂ ಸುರೇಶ್ ಅವರ ಬೆಳವಣಿಗೆ ಕಂಡು ಸಂತೋಷ ಪಡುತ್ತಿದ್ದನು, “ಎರಡು ಹೋರಿ ಕರುಗಳನ್ನು ತಂದು ನಿಲ್ಲಿಸಿದ್ದೇನೆ” ಎಂದು ನಮ್ಮನ್ನು ಚುನಾವಣೆ ಹೊತ್ತಿನಲ್ಲಿ ಬೆಂಬಲವಾಗಿ ನಿಂತು, ನಮ್ಮ ಬೆಳವಣಿಗೆಗೆ ಕಾರಣರಾದರು ಎಂದು ನೆನಪಿಸಿಕೊಂಡರು.
ಡಿ.ಕೆ.ಸುರೇಶ್ ಜನ್ಮ ನೀಡಿದ ಎರಡು ವರ್ಷದ ನಂತರ, ನನ್ನ ತಂಗಿ ಹುಟ್ಟಿದ್ದು ಇದೇ ಊರಿನ ಆಸ್ಪತ್ರೆಯಲ್ಲಿ. ಈ ಊರು ನಮ್ಮ ಕ್ಷೇತ್ರಕ್ಕೆ ಮಾದರಿಯಾದ ಗ್ರಾಮ. ಅನೇಕ ವಿಚಾರಗಳಲ್ಲಿ ಈ ಊರು ಸಾಕ್ಷಿಯಾಗಿ ನಿಂತಿದೆ ಎಂದು ಹೇಳಿದರು.
ಇಡೀ ಊರಿನ ಜನ ಅದರಲ್ಲೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುವ ನೀವು ನನ್ನ ಬೆಂಬಲವಾಗಿ ನಿಂತು ಕೈಹಿಡಿದಿದ್ದೀರಿ ಎಂದು ಕೃತಜ್ಞತೆ ಸಲ್ಲಿಸಿದರು.