ತ್ರಿವೇಣಿ ಗಂಗಾಧರಪ್ಪ
ಭಾರತದ ದೇವಾಲಯಗಳಿಗೆ ಅದ್ಭುತವಾದ ಇತಿಹಾಸದ ಜೊತೆಗೆ ಐತಿಹಾಸಿಕ ಹೆಗ್ಗುರುತುಗಳೂ ಗೋಚರಿಸುತ್ತವೆ. ಇದರಲ್ಲಿ ಅನಂತಪುರ ಜಿಲ್ಲೆಯ ಲೇಪಾಕ್ಷಿ ದೇವಸ್ಥಾನವು ಕೂಡಾ ತನ್ನ ವೈವಿಧ್ಯಮಯ ಶಿಲ್ಪಕಲೆಯಿಂದ ಎಲ್ಲರನ್ನೂ ಆಕರ್ಷಿಸುತ್ತದೆ. ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿದರೆ, ಆಶ್ಚರ್ಯಚಕಿತರಾಗೋದರಲ್ಲಿ ತಪ್ಪೇನಿಲ್ಲ. ಅನಂತಪುರನಿಂದ 15 ಕಿ.ಮೀ ದೂರದಲ್ಲಿರುವ ಲೇಪಾಕ್ಷಿ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯವನ್ನು ಆಳಿದ ರಾಜರು ಕ್ರಿ.ಶ. 16 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಪುರಾಣ ಹೇಳುತ್ತದೆ.108 ಶೈವ ಕ್ಷೇತ್ರಗಳಲ್ಲಿ ಲೇಪಾಕ್ಷಿಯೂ ಒಂದು ಎಂದು ಸ್ಕಂದಪುರಾಣ ತಿಳಿಸುತ್ತದೆ. ಲೇಪಾಕ್ಷಿಯು ಐತಿಹಾಸಿಕ ದೇವಾಲಯವಾಗಿದ್ದು, ಶಿಲ್ಪಿಗಳು ಕೆತ್ತಿದ ಸುಂದರ ಶಿಲ್ಪಗಳನ್ನು ನೋಡಲು ಅಲ್ಲಿಯೇ ಉಳಿಯಬೇಕು ಎಂದು ಅನಿಸುತ್ತದೆ. ಜೊತೆಗೆ ಇಲ್ಲಿನ ವೈಶಿಷ್ಟ್ಯವೇ ಒಂದು ಸೋಜಿಗದ ಸಂಗತಿ.
ಇತಿಹಾಸ:
ಶ್ರೀಕೃಷ್ಣದೇವರಾಯರ ಕಾಲದಲ್ಲಿ ಲೇಪಾಕ್ಷಿ ಬಹಳ ಪ್ರಸಿದ್ಧವಾಯಿತು. ಈ ಊರಿಗೆ ಲೇಪಾಕ್ಷಿ ಎಂಬ ಹೆಸರು ಬರಲು ಕಾರಣ. ಸೀತಾಮಾತೆಯನ್ನು ಅಪಹರಿಸಿದ್ದ ರಾವಣನನ್ನು ಹಿಂಬಾಲಿಸಿದ್ದ ಜಟಾಯು ಪಕ್ಷಿ ಅಡ್ಡಪಡಿಸಿದ್ದಕ್ಕೆ ರಾವಣನ ಕೋಪಕ್ಕೆ ತುತ್ತಾದ ಜಟಾಯು ತನ್ನ ರೆಕ್ಕೆಗಳನ್ನು ಕಳೆದುಕೊಂಡು ಕೆಳಗೆ ಬಿದ್ದಿದ್ದು ಇದೇ ಪ್ರದೇಶದಲ್ಲಿ. ಅಲ್ಲಿಗೆ ಬಂದ ಶ್ರೀರಾಮ ʻಲೇ ಪಕ್ಷಿʼ(ಎದ್ದೇಳು ಪಕ್ಷಿ) ಎಂದನಂತೆ. ಅಂದಿನಿಂದ ಈ ಊರಿಗೆ ಲೇಪಾಕ್ಷಿ ಎಂಬ ಹೆಸರು ಬಂತು ಎಂಬುದು ಪುರಾಣ. ವಿರೂಪಣ್ಣ ನಾಯಕ ಮತ್ತು ವೀರಣ್ಣ ನಾಯಕ ಇಬ್ಬರು ಮಹಾಪುರುಷರು ಆ ರಾಯರ ಪ್ರತಿನಿಧಿಗಳಾಗಿ ಈ ಪಟ್ಟಣದಲ್ಲಿ ಉಳಿದು ಈ ಭಾಗದ ಪ್ರದೇಶವನ್ನು ಆಳಿದರು ಎನ್ನಲಾಗಿದೆ.
ಈ ವೀರಭದ್ರ ದೇವಾಲಯವನ್ನು 15 ಮತ್ತು 16 ನೇ ಶತಮಾನದ ಮಧ್ಯದಲ್ಲಿ ವಿಜಯನಗರದ ಅಚ್ಯುತರಾಯನ ಆಳ್ವಿಕೆಯಲ್ಲಿ ಪೆನುಕೊಂಡದ ಖಜಾಂಚಿಯಾಗಿದ್ದ ವಿರುಪಣ್ಣ ನಿರ್ಮಿಸಿದನೆಂದು ನಂಬಲಾಗಿದೆ. ಈತ ರಾಜಧನವನ್ನು ದುರುಪಯೋಗಪಡಿಸಿಕೊಂಡು ಈ ವೀರಭದ್ರಾಲಯವನ್ನು ನಿರ್ಮಿಸಿದರು ಎಂಬ ದೂರಿನ ಮೇರೆಗೆ ಅಚ್ಯುತರಾಯರು ವಿರೂಪಣ್ಣರನ್ನು ವಿಜಯನಗರಕ್ಕೆ ಬರುವಂತೆ ಓಲೆಯೊಂದನ್ನು ಕಳಿಸಿದ್ದರು. ಅಲ್ಲಿಗೆ ಹೋದ ಮೇಲೂ ಶಿಕ್ಷೆ ತಪ್ಪಿದ್ದಲ್ಲ ಎಂಬುದನ್ನರಿತ ವಿರೂಪಣ್ಣ ರಾಜ ವಿಧಿಸುವ ಶಿಕ್ಷೆಯನ್ನು ತಾನೇ ವಿಧಿಸಿಕೊಂಡು ತನ್ನ ಕಣ್ಣನ್ನು ಕಿತ್ತು ದೇವಸ್ಥಾನದ ಗೋಡೆಗೆಸೆದ ಎಂದು ಹೇಳಲಾಗುತ್ತದೆ. ಅಲ್ಲಿಗೆ ಮಂದಿರ ನಿರ್ಮಾಣ ಕಾರ್ಯ ಮೂರನೇ ಒಂದು ಭಾಗದಷ್ಟು ನಿಂತು ಹೋಗಿದೆ ಎನ್ನಲಾಗಿದೆ. ಈ ದೇವಾಲಯವನ್ನು ನಿರ್ಮಿಸುವ ಮೊದಲು, ಈ ಸ್ಥಳವು ಕೂರ್ಮ ಸೈಲಂ ಎಂಬ ಬೆಟ್ಟವಾಗಿತ್ತು. ವಿರುಪಣ್ಣ ಪೆನುಕೊಂಡ ಒಡೆಯರ ಹಣದಿಂದ ಈ ಬೆಟ್ಟದ ಮೇಲೆ ಏಳು ಪ್ರಾಕಾರಗಳನ್ನು ಹೊಂದಿರುವ ದೇವಾಲಯವನ್ನು ನಿರ್ಮಿಸಲಾಗಿದೆ ಆದರೆ ಈಗ ಕೇವಲ ಮೂರು ಗೋಡೆಗಳು ಮಾತ್ರ ಉಳಿದಿವೆ.
ವೈಶಿಷ್ಟ್ಯತೆ:
ಲೇಪಾಕ್ಷಿ ದೇವಾಲಯವನ್ನು ಸುಂದರವಾದ ಕೆಂಪು, ನೀಲಿ, ಹಳದಿ ಹಸಿರು, ಕಪ್ಪು ಮತ್ತು ಬಿಳಿ ನೈಸರ್ಗಿಕ ಹೂವು, ಹಣ್ಣುಗಳ ಬಣ್ಣಗಳನ್ನು ಬಳಸಿ ಸುಂದರವಾದ ವರ್ಣಚಿತ್ರಗಳೊಂದಿಗೆ ಕೆತ್ತಲಾಗಿದೆ.
ಇವು ಕೃಷ್ಣದೇವರಾಯನ ಕಾಲದ ಶ್ರೀಮಂತ ಕಲೆಯ ಹಿರಿಮೆಯನ್ನೂ ಕಾಣಬಹುದು. ಇನ್ನೊಂದು ವಿಶೇಷವಿದೆ, ಗಾಳಿಯಲ್ಲಿ ನೇತಾಡುವ ಕಂಬವನ್ನು ನೋಡಬಹುದು. ಆದರೆ ಇದರ ಬಗ್ಗೆ ಎಷ್ಟೇ ಸಮೀಕ್ಷೆ, ಸಂಶೋಧನೆಗಳು ನಡೆದರೂ ಅದರ ಅಂತರಂಗ ಇನ್ನೂ ಬಹಿರಂಗವಾಗಿಲ್ಲ. ಅದರ ಈಚೆ ಬದಿಯಿಂದ ಕರವಸ್ತ್ರ ಸೇರಿಸಿದರೆ ಆಚೆ ಬದಿಯಿಂದ ಹೊರಬರುತ್ತದೆ ಬೇಕಾದರೆ ನೀವಿದನ್ನು ಪರೀಕ್ಷಿಸಿಬಹುದು. ದೇವಾಲಯದಲ್ಲಿ ಲೇಪಾಕ್ಷಿ ನಂದಿಯ ವಿಗ್ರಹವಿದೆ. ಇದು ಜೀವಂತ ಶಿಲ್ಪದಂತೆ ಕಾಣುತ್ತದೆ.
ದೇವಾಲಯದಲ್ಲಿ 70 ಕಂಬಗಳಿದ್ದು, ಈ ಒಂದು ಕಂಬ ಮಾತ್ರ ಗಾಳಿಯಲ್ಲಿ ತೇಲುತ್ತಿರುವುದು ಕಂಡು ಬರುತ್ತದೆ. ಬ್ರಿಟಿಷರ ಕಾಲದಲ್ಲೂ ಅದನ್ನು ಅಲುಗಾಡಿಸಲು ಪ್ರಯತ್ನಿಸಿದರು. ಆದರೆ ಅವರಿಂದ ಏನು ಮಾಡಲಾಗಲಿಲ್ಲ? ಅಲ್ಲಿಗೆ ಬರುವ ಭಕ್ತರಿಗೆ ಸ್ತಂಭ ಆಕರ್ಷಕವಾಗಿ ಕಾಣುತ್ತದೆ. ಇದಕ್ಕೂ ಒಂದು ಕಥೆ ಇದೆ ಭೂಕಂಪ ಸಂಭವಿಸಿದಾಗ, ಗಾಳಿಯಲ್ಲಿರುವ ಕಂಬವು ಉಳಿದ ಕಂಬಗಳಿಗೆ ರಕ್ಷಣೆಯಾಗಿದೆ ಎಂದು ನಂಬಲಾಗಿದೆ. ಇದರ ಜೊತೆಗೆ ಏಳು ಹೆಡೆಯ ಸರ್ಪದ ವಿಗ್ರಹ, ನಂದಿ ಮೂರ್ತಿ, ಕೆತ್ತಿದ ಶಿಲಾಮೂರ್ತಿಗಳು ಇನ್ನೂ ಹತ್ತು ಹಲವು ವೈಶಿಷ್ಟ್ಯಗಳು ಈ ವೀರಭದ್ರನ ನೆಲೆಯಲ್ಲಿವೆ.