ಹೊಸ ದಿಗಂತ ವರದಿ, ಕಲಬುರಗಿ:
ಕರ್ನಾಟಕ ಇತಿಹಾಸದಲ್ಲಿ ಸಾಮಾಜಿಕ ಪರಿವರ್ತನೆಯ ಅತಿದೊಡ್ಡ ಕಾರ್ಯಕ್ರಮ ಇದಾಗಿದ್ದು, ತಾಂಡಾ, ಹಾಡಿ, ಹಟ್ಟಿ ಮುಂತಾದ ಜನವಸತಿ ಪ್ರದೇಶಗಳ ಜನರ ಜಾಗ ನಿಮ್ಮದಾಗಿರಲಿಲ್ಲ. 50 ವರ್ಷಗಳ ಬೇಡಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆಯಿಂದಾಗಿ ನಾವು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ನಲ್ಲಿ ಆಯೋಜಿಸಿದ್ದ ಹಕ್ಕು ಪತ್ರ ವಿತರಣೆ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸೂರಿಲ್ಲದ ಜನರಿಗೆ ಸೂಸ್ಥಿರವಾದ ಸೂರು ಕಲ್ಪಿಸಿಕೊಡಲು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರೆ ಪ್ರೇರಣೆ ಎಂದು ಹೇಳಿದ ಅವರು, ನರೇಂದ್ರ ಮೋದಿ ‘ಸಾಮಾಜಿಕ ಪರಿವರ್ತಕ’ ಎಂದು ಬಣ್ಣಿಸಿದರು.
ನಮ್ಮ ಡಬಲ್ ಇಂಜಿನ್ ಸರ್ಕಾರ ಸಾಮಾಜಿಕ ಭದ್ರತೆ ಕೊಡುವ ಮೂಲಕ ಇಂತಹ ಶೋಷಿತ ಸಮುದಾಯಕ್ಕೆ ಸಾಮಾಜಿಕ ಪರಿವರ್ತನೆ ಮಾಡುತ್ತಿದ್ದೇವೆ. ಪ್ರಧಾನಮಂತ್ರಿಗಳಿಂದ ಇಂದು ಹಕ್ಕುಪತ್ರ ನೀಡಿದ್ದು, ಈ ಸಮಾಜಕ್ಕೆ ದೊಡ್ಡ ಗೌರವ ಕೊಟ್ಟಂತೆ ಆಗಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯ ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದೆ ಎಂದರು.
ಕಂದಾಯ ಸಚಿವರಾದ ಆರ್. ಅಶೋಕ್ ಅವರ ಮೂಲಕ ಕಂದಾಯ ಕ್ರಾಂತಿ ರಾಜ್ಯದಲ್ಲಿ ಆಗುತ್ತಿದೆ. ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿರುವ ಗ್ರಾಮಗಳಲ್ಲಿನ ಜನರಿಗೆ ಈಗ ಹಕ್ಕುಪತ್ರ ನೀಡಲಾಗುತ್ತಿದ್ದು, ಇವರಿಗೆ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಅವರ ಆಸ್ತಿಯನ್ನು ಉಚಿತವಾಗಿ ನೊಂದಣಿ ಮಾಡಿಸಿ, ಅವರಿಗೆ ದಾಖಲೆ ನೀಡುವಂತೆ ಮಾಡಲಾಗುವುದು ಎಂದರು.
ಒಂದೇ ದಿನ, ಒಂದೇ ವೇದಿಕೆ ಸಮಾರಂಭದಲ್ಲಿ 52,072 ಹಕ್ಕು ಪತ್ರಗಳನ್ನು ಲಂಬಾಣಿ ತಾಂಡಾ ಫಲಾನುಭವಿಗಳಿಗೆ ವಿತರಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದಕ್ಕಾಗಿ, ವರ್ಲ್ಡ್ ಬುಕ್ ಆಫ್ ರೆಕಾಡ್ರ್ಸ್ನಲ್ಲಿ ಸೇರಿದೆ ಎಂದರು.