ಹೊಸದಿಗಂತ ಡಿಜಿಟಲ್ ಡೆಸ್ಕ್:
ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯದ ಸ್ತಬ್ಧಚಿತ್ರವೂ ಇರಲಿದ್ದು, ಒಂದೇ ವಾರದಲ್ಲಿ ಸ್ತಬ್ಧಚಿತ್ರ ತಯಾರಾಗುತ್ತಿದೆ. ಈ ಬಾರಿ ನಾರಿ ಶಕ್ತಿ ಸ್ತಬ್ಧಚಿತ್ರದ ಥೀಮ್ ಆಗಿದೆ. ಕಡೇ ಸಮಯದಲ್ಲಿ ರಾಜ್ಯದ ಟ್ಯಾಬ್ಲೋಗೆ ಅನುಮತಿ ಸಿಕ್ಕಿದ್ದು, ಕೇವಲ ಎಂಟು ದಿನಗಳಲ್ಲಿ ಟ್ಯಾಬ್ಲೋ ನಿರ್ಮಾಣವಾಗಲಿದೆ.
ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ರಾಜ್ಯದ ಕಲಾ ತಂಡವೂ ಪರೇಡ್ನಲ್ಲಿ ಭಾಗಿಯಾಗಲಿದೆ. ನಂದಿ ಧ್ವಜ ಕುಣಿತದ ಕಲಾವಿದರು ಪರೇಡ್ನಲ್ಲಿ ಭಾಗವಹಿಸಲಿದ್ದಾರೆ. ಕಡೇ ಹಂತದಲ್ಲಿ ಕೇಂದ್ರ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅನುಮತಿ ನೀಡಿದೆ. ಈ ನಡೆಯನ್ನು ವಿಪಕ್ಷ ನಾಯಕರು ಖಂಡಿಸಿದ್ದರು.
ಸತತ 13 ವರ್ಷಗಳು ಗಣರಾಜ್ಯೋತ್ಸವದ ಪರೇಡ್ನಲ್ಲಿ ಕರ್ನಾಟಕದ ಟ್ಯಾಬ್ಲೋ ಇತ್ತು. ಆದರೆ ಈ ಬಾರಿ ರಾಜ್ಯದ ಹೆಸರನ್ನು ಹೇಳಿ, ತೆಗೆದು, ಮತ್ತೆ ಸೇರಿಸಲಾಗಿದೆ. ಮೊದಲು ಕರ್ನಾಟಕಕ್ಕೆ ಸ್ಥಾನ ನೀಡಿರಲಿಲ್ಲ. ತದನಂತರ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಯತ್ನಿಸಿದ್ದು, ಕೇಂದ್ರ ಅನುಮತಿ ನೀಡಿತ್ತು.