ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ಮಡಿಕೇರಿಗೆ ಆಗಮಿಸಬೇಕಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ಗಂಟೆ ತಡವಾಗಿ ಹೆಲಿಪ್ಯಾಡ್’ಗೆ ಬಂದಿಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ, ಮಡಿಕೇರಿ ಪ್ರಥಮ ಪ್ರಜೆ ಅನಿತಾ ಪೂವಯ್ಯ, ಬಿಜೆಪಿ ಪ್ರಮುಖರಾದ ಭಾರತೀಶ್, ರವಿಕುಶಾಲಪ್ಪ, ರೀನಾ ಪ್ರಕಾಶ್, ರವಿಕಾಳಪ್ಪ , ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಜಿ.ಪಂ. ಸಿಇಓ ಡಾ.ಆಕಾಶ್ ಸೇರಿದಂತೆ ಪ್ರಮುಖರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದರು.
ಮಾನವ- ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಿಂದ ಸೂಕ್ತ ಯೋಜನೆ ರೂಪಿಸಲಿರುವುದಾಗಿ ಬೊಮ್ಮಾಯಿ ಅವರು ತಿಳಿಸಿದರು.
ಮಡಿಕೇರಿಯ ಹೆಲಿಪ್ಯಾಡ್’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸೋಲಾರ್ ಬೇಲಿಗೆ 68 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ. ಕೊಡಗಿನಿಂದ ಸಕಲೇಶಪುರದವರೆಗೂ ವನ್ಯಜೀವಿ ದಾಂಧಲೆ ತಡೆಗೆ ವಿಶೇಷ ಯೋಜನೆ ರೂಪಿಸಲಿದ್ದು, ತಜ್ಞರು ಕೂಡಾ ಪರಿಶೀಲಿಸಿ ವರದಿ ನೀಡಲಿದ್ದಾರೆ ಎಂದರು.
ಪ್ರಗತಿಗೆ ತೊಡಕು: ಕೊಡಗಿನಲ್ಲಿ ನಿರಂತರ ಮಳೆಯಿಂದಾಗಿ ಪ್ರಗತಿ ಕಾಮಗಾರಿಯ ವೇಗಕ್ಕೆ ತೊಡಕಾಗಿದೆ. ಹೀಗಿದ್ದರೂ ಕೊಡಗಿನ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ ಸಮರ್ಪಕ ಅನುದಾನ ನೀಡಲಾಗಿದೆ ಎಂದು ನುಡಿದರು.