ಹೊಸದಿಗಂತ ವರದಿ,ಶ್ರೀರಂಗಪಟ್ಟಣ :
ತರಗತಿಗೆ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ತಂದಿದ್ದ ಕಾರಣ ಮುಖ್ಯ ಶಿಕ್ಷಕಿಯೊಬ್ಬರು ಆಕೆಯ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿಹಾಕಿ ಶಿಕ್ಷಿಸುವ ಜೊತೆಗೆ ಅಮಾನೀಯವಾಗಿ ನಡೆದುಕೊಂಡುರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಒಂದು ವಾರದ ಹಿಂದೆ ಈ ಅಮಾನವೀಯ ನಡೆದಿದ್ದು, ಬಾಲಕಿಯ ಪೋಷಕರು ಮುಖ್ಯ ಶಿಕ್ಷಕಿಯ ವಿರುದ್ದ ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ತರಗತಿಗೆ ಮೊಬೈಲ್ ತಂದಿರುವುದನ್ನು ಗಮನಿಸಿದ ಶಾಲೆಯ ಮುಖ್ಯ ಶಿಕ್ಷಕಿ ಸ್ನೇಹಲತಾ ಆ ವಿದ್ಯಾರ್ಥಿನಿ ಒಬ್ಬಳನೇ ಬೇರೆ ಕೊಠಡಿಗೆ ಕರೆದೋಯ್ದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಮುಖ್ಯ ಶಿಕ್ಷಕಿ ಈ ನಡೆಯನ್ನು ಖಂಡಿಸಿದ ಗ್ರಾಮಸ್ಥರು ಕೂಡಲೇ ಮುಖ್ಯ ಶಿಕ್ಷಕಿಯನ್ನು ಅಮಾನತ್ತು ಮಾಡಿ ಜೊತೆಗೆ ಅವರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಈ ಸಂಬಂಧ ಪ್ರತಿಕ್ರಿಯಿಸಿ, ಗ್ರಾಮಸ್ಥರು ಹಾಗೂ ಬಾಲಕಿಯ ಪೋಷಕರ ದೂರಿನ್ವಯ ಶಾಲೆಗೆ ಭೇಟಿ ನೀಡಿ ಬಾಲಿಕಿಯಿಂದ ಮಾಹಿತಿ ಪಡೆದಿದ್ದೇನೆ. ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಜೊತೆಗೆ ಈ ಸಂಬಂಧ ಈಗಾಗಲೇ ಮಂಡ್ಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮಾಹಿತಿ ನೀಡಿದ್ದು, ಮುಖ್ಯ ಶಿಕ್ಷಕಿಯ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ.
ತಾ.ಪಂ ಮಾಜಿ ಸದಸ್ಯ ರಾಮಕೃಷ್ಣ, ಗ್ರಾ.ಪಂ ಸದಸ್ಯೆ ಬೃಂದಾ, ಎಸ್ಡಿಎಂಸಿ ಅಧ್ಯಕ್ಷೆ ಪ್ರತಿಭಾ, ಜನವಾದಿ ಸಂಘದ ಜಯಮ್ಮ, ಸುಜಾತ, ಪುರುಷೋತ್ತಮ, ಮಂಜುನಾಥ ಸೇರಿದಂತೆ ಇತರ ಗ್ರಾಮಸ್ಥರು ತಹೀಲ್ದಾರ್ ಅವರಿಗೆ ದೂರು ನೀಡುವ ವೇಳೆ ಹಾಜರಿದ್ದರು.