ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ಆನೆಗಳ ಕಾದಾಟ ಭಾರೀ ದುರಂತಕ್ಕೆ ಕಾರಣವಾಗಿದೆ. ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದೆ. ಘಟನೆ ಬಳಿಕ ಶಿಬಿರದಲ್ಲಿ ಮೌನ ಆವರಿಸಿದ್ದು, ಪ್ರವಾಸಿಗರ ಪ್ರವೇಶವನ್ನೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಕಾದಾಟದಲ್ಲಿ ತೀವ್ರ ಗಾಯ
ಸೋಮವಾರ ನಡೆದ ಘರ್ಷಣೆಯಲ್ಲಿ ಕಂಜನ್ ಆನೆ, ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಸೇರಿದಂತೆ ದೇಹದ ಹಲವು ಭಾಗಗಳಿಗೆ ತೀವ್ರವಾಗಿ ತಿವಿದಿತ್ತು. ಗಾಯಗೊಂಡ ಆನೆಯನ್ನು ಕೂಡಲೇ ಚಿಕಿತ್ಸೆಗೆ ಒಳಪಡಿಸಲಾಗಿತ್ತು.
ಇದನ್ನೂ ಓದಿ:
ವೈದ್ಯರ ಪ್ರಯತ್ನ ಫಲಿಸಿಲ್ಲ
ಪಶುವೈದ್ಯರಾದ ಡಾ. ಮುಜಿಭ್ ಮತ್ತು ಚಿಟ್ಟಿಯಪ್ಪ ನೇತೃತ್ವದಲ್ಲಿ ಚಿಕಿತ್ಸೆ ಮುಂದುವರಿದರೂ, ಮಾರ್ತಾಂಡ ಆನೆ ಬದುಕುಳಿಯಲಿಲ್ಲ. ಒಳಗಾಯಗಳ ತೀವ್ರತೆ ಹೆಚ್ಚಿದ್ದ ಕಾರಣ ಚಿಕಿತ್ಸೆ ಫಲಿಸಿಲ್ಲ ಎಂದು ತಿಳಿದುಬಂದಿದೆ.
ದುಬಾರೆ ಶಿಬಿರ ಬಂದ್
ಘಟನೆ ಹಿನ್ನೆಲೆ ದುಬಾರೆ ಸಾಕಾನೆ ಶಿಬಿರವನ್ನು ಮುಂದಿನ ಆದೇಶದವರೆಗೆ ಬಂದ್ ಮಾಡಲಾಗಿದೆ. ಇದೇ ಕಾದಾಟದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಸ್ಥರು ನೇತ್ರದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.



