ಹೊಸದಿಗಂತ ಡಿಜಿಟಲ್ ಡೆಸ್ಕ್
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹುಲಿಗಳ ದಾಳಿ ಹೆಚ್ಚಾಗಿದ್ದು, ಭಾನುವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹುಲಿಯೊಂದು ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಈ ಗ್ರಾಮವು ಬಂಡೀಪುರ ಕಾಡಂಚಿನಲ್ಲಿ ಇರುವುದರಿಂದ ಜನತೆಗೆ ಜೀವ ಭಯ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಚೌಡಹಳ್ಳಿ ಗ್ರಾಮದ ನಾಗರಾಜ್ ಎಂಬುವವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಹುಲಿ ಬಂದಿದೆ. ಅವರ ಮೇಲೆ ಎರಗಲು ಮುಂದಾಗಿದೆ. ತಕ್ಷಣವೇ ಅವರು ಪಕ್ಕಕ್ಕೆ ಸರಿದಿದ್ದಾರೆ. ಅಲ್ಲದೆ, ಜೋರಾಗಿ ಕಿರುಚಿಕೊಂಡಿದ್ದಾರೆ. ಇದೇ ವೇಳೆ ಅಕ್ಕಪಕ್ಕದ ಹೊಲ ಸೇರಿದಂತೆ ಸುತ್ತಮುತ್ತಲು ಇದ್ದ ಜನರೂ ಸಹ ಕೂಗಿಕೊಂಡಿದ್ದಾರೆ. ಕೈಗೆ ಸಿಕ್ಕ ಕಲ್ಲು ಸೇರಿ ಆಯುಧಗಳನ್ನು ಹಿಡಿದುಕೊಂಡಿದ್ದಾರೆ. ಅಷ್ಟೆಲ್ಲ ಜನ ಒಂದೇ ಬಾರಿಗೆ ಕೂಗಿದ್ದರಿಂದ ಗಾಬರಿಗೊಂಡ ಹುಲಿಯು ಅಲ್ಲಿಂದ ಕಾಲ್ಕಿತ್ತಿದೆ.