ಹೊಸದಿಗಂತ ವರದಿ ಮಡಿಕೇರಿ:
ಕಾಡಾನೆ ತುಳಿತಕ್ಕೆ ಒಳಗಾಗಿ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ನಾಪೋಕ್ಲು ಸಮೀಪದ ಕಕ್ಕಬ್ಬೆ ನಾಲಡಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಕಕ್ಕಬ್ಬೆ ನಾಲಡಿ ಗ್ರಾಮದ ನಿವಾಸಿ ಕಂಬೆಯಂಡ ರಾಜ ದೇವಯ್ಯ (59)ಮೃತ ದುರ್ದೈವಿ.
ಕಕ್ಕಬ್ಬೆಯಲ್ಲಿ ಆಟೋ ಚಾಲಕರಾಗಿರುವ ರಾಜ ದೇವಯ್ಯ ಶನಿವಾರ ಬೆಳಗ್ಗೆ ನಾಲಡಿ ಗ್ರಾಮದ ತೋಡುಕೆರೆ ಎಂಬಲ್ಲಿರುವ ತಮ್ಮ ತೋಟಕ್ಕೆ ನಾಯಿಯೊಂದಿಗೆ ಕೆಲಸಕ್ಕೆಂದು ತೆರಳಿದಾಗ ಕಾಡಾನೆ ದಾಳಿ ನಡೆಸಿದೆ.
ಈ ಸಂದರ್ಭ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ನಾಯಿ ಮಾತ್ರ ಮನೆಗೆ ವಾಪಾಸಾಗಿರುವುದನ್ನು ಕಂಡು ಗಾಬರಿಗೊಂಡ ಪತ್ನಿ ತೋಟಕ್ಕೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂದರ್ಭ ತೋಟದಲ್ಲಿ ಮೂರು ಆನೆಗಳಿದ್ದುದಾಗಿ ಹೇಳಲಾಗಿದೆ.
ಸ್ಥಳಕ್ಕೆ ನಾಪೋಕ್ಲು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.