ಹೊಸದಿಗಂತ ಬಾಗಲಕೋಟೆ:
ಶ್ರೇಷ್ಠ ಆರ್ಥಿಕ ತಜ್ಞರು, ಭ್ಯವ ಭಾರತ ಬಗ್ಗೆ ದೂರದೃಷ್ಟಿ ಹೊಂದಿದ್ದ ನಾಯಕರು, ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ನಿಧನ ದುಃಖ ತಂದಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಖ್ಯಾತರ ಅಗಲುವಿಕೆ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಆರ್ಥಿಕತೆ ಕುಸಿತವಾದ ಸಂದರ್ಭದಲ್ಲಿ ತಮ್ಮ ದೂರದೃಷ್ಟಿಯ ಆಲೋಚನೆಯಿಂದ ಆರ್ಥಿಕತೆ ಸುಧಾರಣೆಗೆ ಕಾರಣವಾದವರು. 10 ವರ್ಷಗಳ ಆಡಳಿತಾವಧಿಯಲ್ಲಿ ಹಲವು ಹೆಜ್ಜೆಗುರುತಗಳ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಹಾರ ಭದ್ರತೆ, ಆಧಾರ್ ಕಾರ್ಡ್, ನರೇಗಾ ಯೋಜನೆ ಜಾರಿ ಸೇರಿದಂತೆ ಹತ್ತಾರು ಕ್ರಾಂತಿಕಾರಿ ಯೋಜನೆಗಳು ಎಂದಿಗೂ ಅಜರಾಮರ. ಇಂತಹ ಮುತ್ಸದ್ದಿ ನಾಯಕ, ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಿದ್ದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದಿದ್ದಾರೆ.
ಮನಮೋಹನ್ ಸಿಂಗ್ ಅವರಿಗೆ ಸದ್ಗತಿ ದೊರಕಲಿ, ಅವರ ಕುಟುಂಬಸ್ಥರು ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.